ಯುಗಾದಿಯ ಹೊಸ ತಳಿರು, ಎಲ್ಲೆಲ್ಲೂ ಸಂಭ್ರಮದ ಚಿಗುರು..

ಯುಗಗಳ ಆದಿ ಯುಗಾದಿ ಬಂತೆಂದರೆ ಎಲ್ಲೆಡೆಯೂ ಸಡಗರ, ಎಲ್ಲೆಲ್ಲೂ ತಳಿರು ತೋರಣಗಳ ಅಲಂಕಾರ ವರುಷ ಕಳೆದಂತೆ ಜನರ ಜೀವನ ಬದಲಾದರೂ ಹಬ್ಬಗಳ ಆಚರಣೆ, ನಂಬಿಕೆಗಳಲ್ಲಿ ಬದಲಾವಣೆ ಇಲ್ಲ, ಹಳೆ ಬೇರು ಹೊಸ ಚಿಗುರು ಮಾತಿನಂತೆ ಯುಗಾದಿಯು ಕಾಲ ಕಳೆದಂತೆ ಜನರಲ್ಲಿ ಹೊಸ ಉತ್ಸುಕತೆ ಮೂಡಿಸುತ್ತ ಬಂದಿದೆ.

ಹಿಂದೂಗಳ ಹೊಸ ವರ್ಷವಾದ ಯುಗಾದಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಕಲಿಯುಗದ ಆರಂಭ – ಚೈತ್ರ ಶುದ್ಧ ಪಾಡ್ಯಮಿಯಂದು ಶ್ರೀಕೃಷ್ಣನ ಗತಕಾಲವು ದ್ವಾಪರ ಯುಗದ ಅಂತ್ಯ ಮತ್ತು ಕಲಿಯುಗದ ಆರಂಭವನ್ನು ಸೂಚಿಸುತ್ತದೆ, ಇದು ಹೊಸ ಯುಗದ ಆರಂಭದ ಹಂತವನ್ನು ಸೂಚಿಸುತ್ತದೆ. ಇದೆ ರೀತಿಯ ಯುಗಾದಿಗೆ ತನ್ನದೆ ಆದ ವಿಭಿನ್ನ ಇತಿಹಾಸವಿದೆ. ಯುಗಾದಿಯ ಕೇವಲ ವರುಷದ ಆರಂಭ ಮಾತ್ರವಲ್ಲ, ಪ್ರತಿಯೊಂದು ಕಾರ್ಯಕ್ಕೂ ಮುನ್ನುಡಿ, ಹಾಗಾಗಿ ಜನರು ಯುಗಾದಿ ಸಮಯದಲ್ಲಿ ತಮ್ಮ ವೈಯಕ್ತಿಕ ಗುರಿಗಳನ್ನು ಪ್ರಾರಂಭಿಸುತ್ತಾರೆ. ಇದು ಯಶಸ್ಸಿಗೆ ಸೂಕ್ತ ಸಮಯವೆಂದು ಜನರು ನಂಬಿಕೆ.

ಹಬ್ಬದ ದಿನ ಪ್ರತಿಯೊಂದು ಮನೆ ಮುಂದೆ ವರ್ಣರಂಜಿತ ರಂಗೋಲಿ, ಮಾವಿನ ಎಲೆಗಳ ತೋರಣ, ಅಭ್ಯಂಜನ ಸ್ನಾನ ಮಾಡಿ, ಹೊಸ ವರ್ಷವನ್ನು ಸ್ವಾಗತಿಸಿ, ಎಳ್ಳು ಬೆಲ್ಲ ಹಂಚಿ ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ. ಬೇವಿನ ಮೊಗ್ಗುಗಳು, ಬೆಲ್ಲ, ಹಸಿರು ಮೆಣಸಿನಕಾಯಿ, ಉಪ್ಪು, ಹುಣಸೆಹಣ್ಣು ಮತ್ತು ಹಸಿ ಮಾವಿನಕಾಯಿ ಸೇರಿದಂತೆ ಸಿಹಿಯಿಂದ ಕಹಿಯವರೆಗೆ ಆರು ವಿಭಿನ್ನ ರುಚಿಗಳನ್ನು ಒಳಗೊಂಡಿರುವ ಯುಗಾದಿ ಪಚ್ಚಡಿಯ ವಿಶಿಷ್ಟ ಖಾದ್ಯವನ್ನು ತಯಾರಿಸಲಾಗುತ್ತದೆ.

ದೇಶದ ವಿವಿಧೆಡೆಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲ್ಪಡುವ ಈ ಯುಗಾದಿಯ ಒಬ್ಬರಿಗೆ ಕರ್ನಾಟಕದವರಿಗೆ ಯುಗಾದಿ ಆದರೆ ಮಹಾರಾಷ್ಟ್ರ ದವರಿಗೆ ಗುಡಿಪಡ್ವಾ, ಹಾಗೆ ಪಂಜಾಬ್‌ನಲ್ಲಿ ಬೈಸಾಖಿ, ಸಿಂಧಿಗಳಲ್ಲಿ ಚೈತಿ ಚಂದ್, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಮತ್ತು ಕೇರಳದಲ್ಲಿ ವಿಶು ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಆಚರಣೆಗಳ ವಿಧಾನ ಬದಲಾದರೂ ಹಬ್ಬದ ಸಡಗರ ಎಲ್ಲೆಡೆಯೂ ಒಂದೆ.

-ರಶ್ಮಿತಾ ಸಂತೋಷ್
ಪತ್ರಿಕೋದ್ಯಮ ವಿದ್ಯಾರ್ಥಿನಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ