ಉಡುಪಿ: ಇಂದು ಕುಡಿತ ಎಂಬುದು ಪ್ರತಿಷ್ಠೆಯ ವಿಚಾರವಾಗಿದೆ. ಸಂಘಸಂಸ್ಥೆಗಳು ಪಾರ್ಟಿಯ ನೆಪದಲ್ಲಿ ಕುಡಿತವನ್ನು ಪ್ರೇರೆಪಿಸುತ್ತಿವೆ. ಇದರ ಪರಿಣಾಮ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಮದ್ಯವ್ಯಸನ ಹಬ್ಬಿದೆ ಎಂದು ಚಾಮರಾಜನಗರದ ದೀನಬಂಧು ಮಕ್ಕಳ ಮನೆಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಜಯದೇವ್ ಜಿ.ಎಸ್. ಆತಂಕ ವ್ಯಕ್ತಪಡಿಸಿದರು.
ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಮುಂಬಯಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಒನ್ ಗುಡ್ ಸ್ಟೆಪ್, ಮಣಿಪಾಲ ರೋಟರಿ ಕ್ಲಬ್ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಂಯುಕ್ತ ಆಶ್ರಯದಲ್ಲಿ ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಉಡುಪಿ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ “ಮಕ್ಕಳು ಬೆಳೆಯುತ್ತಿದ್ದಾರೆ..ಜಾಗೃತೆ!” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕುಡಿತದ ಕಾರಣದಿಂದ ಕುಟುಂಬದಲ್ಲಿ ಹಿಂಸೆ ಹೆಚ್ಚಾಗುತ್ತಿದೆ. ಹಿಂಸೆಯಿಂದ ಮಕ್ಕಳ ಮನಸ್ಸಿನಲ್ಲಿ ಆತಂಕ ಮೂಡಿ ಮಕ್ಕಳ ಜೀವನ ಅತಂತ್ರವಾಗುತ್ತದೆ. ಆ ಮೂಲಕ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಖಿನ್ನತೆ ಮತ್ತು ಆತಂಕ ಮನೆ ಮಾಡುತ್ತದೆ. ಅಲ್ಲದೆ, ಇದು ಮಕ್ಕಳ ಮೆದುಳನ್ನು ಕುಗ್ಗಿಸುತ್ತದೆ ಎಂದರು.
ತಂತ್ರಜ್ಞಾನಗಳು ಹಸಿವು, ಮನುಷ್ಯನ ನೋವನ್ನು ಕಡಿಮೆ ಮಾಡುವುದಿಲ್ಲ. ಅದು ನಮ್ಮ ಯಾವ ರೀತಿಯಲ್ಲೂ ಕಾಪಾಡುವುದಿಲ್ಲ. ಮನುಷ್ಯನ ನೋವಿಗೆ ಸ್ಪಂದಿಸುವ ಮನುಷ್ಯತ್ವದ ಗುಣ ಹೊಂದಿರುವ ವ್ಯಕ್ತಿಗಳಿಂದ ನಮ್ಮನ್ನು ಕಾಪಾಡಲು ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ, ಶಿವಮೊಗ್ಗ ಸರ್ಜಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಧನಂಜಯ ಸರ್ಜಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ಮಕ್ಕಳ ವೈದ್ಯರ ಸಂಘದ ಉಪಾಧ್ಯಕ್ಷ ಡಾ.ಪ್ರೀತಿ ಗಲಗಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಉಡುಪಿ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಒನ್ಗುಡ್ ಸ್ಟೆಪ್ ಸಂಸ್ಥಾಪಕ ಅಮಿತಾ ಪೈ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ.ಗಿರಿಜಾ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನೋವೈದ್ಯ ಹಾಗೂ ಲೇಖಕ ಡಾ.ವಿರೂಪಾಕ್ಷ ದೇವರಮನೆ ಅವರ ‘ನೀನು ಒಂಟಿಯಲ್ಲ’ ಪುಸ್ತಕದ ನಾಲ್ಕನೇ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು. ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.












