ಮಂಗಳೂರು: ತಾಯಿ ಹಾಗೂ ಎರಡು ವರ್ಷದ ಮಗು ಕೊಳದಲ್ಲಿ ಬಿದ್ದು ಮೃತ್ಯು.

ಮಂಗಳೂರು: ಮನೆಯೊಂದರ ಬಳಿಯಿರುವ ಅಡಿಕೆ ತೋಟದಲ್ಲಿರುವ ಕೊಳದಲ್ಲಿ ಬಿದ್ದು ತಾಯಿ ಹಾಗೂ ಎರಡು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಬಳಿಕ ಪೆರ್ಲ ಉಕ್ಕಿನಡ್ಕ ಸಮೀಪದ ಏಳ್ಕಾನದಲ್ಲಿ ಸಂಭವಿಸಿದೆ.

ಮೃತಪಟ್ಟವರು ಉಕ್ಕಿನಡ್ಕ ಬಳಿಯ ಏಳ್ಕಾನ‌ ದಟ್ಟಿಗೆಮೂಲೆ ನಿವಾಸಿ ಈಶ್ವರ ನಾಯ್ಕರ‌ ಪತ್ನಿ ಪರಮೇಶ್ವರಿ (42), ಪುತ್ರಿ. ಪದ್ಮಿನಿ (2) ಎಂದು ತಿಳಿಯಲಾಗಿದೆ.

ಪತಿ ಈಶ್ವರ ನಾಯ್ಕ ಹಾಗೂ ಪುತ್ರ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅವರು ಹಿಂತಿರುಗಿದಾಗ ಈ ದಾರುಣ ಘಟನೆ ‌ಕಂಡು ಬಂದಿದೆ. ಮನೆಯಲ್ಲಿ ಈಶ್ವರ ನಾಯ್ಕರ ಸಹೋದರ ಶಿವಪ್ಪ ನಾಯ್ಕ ಅವರು ಖಾಯಿಲೆಯಿಂದ ಮನೆಯೊಳಗೆ ಮಲಗಿದಲ್ಲಿಯೇ ಇದ್ದರು. ಊರವರು ತಲುಪಿ ಇಬ್ಬರನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ‌ ಇಬ್ಬರೂ ಮೃತಪಟ್ಟಿದ್ದರು ಎನ್ನಲಾಗಿದೆ.

ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬದಿಯಡ್ಕ ಪೊಲೀಸರು‌ ಪ್ರಕರಣ ದಾಖಲಿಸಿದ್ದಾರೆ.