ಉಡುಪಿ: ಕರಾವಳಿಯಲ್ಲಿ ಮೀನುಗಾರಿಕಾ ವೃತ್ತಿ ಮಾಡುವ ಮೊಗವೀರ ಸಮುದಾಯದ ಬಾರ್ಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಿತು.
ಈ ಪ್ರಯುಕ್ತ ನಡೆದ ತೆಪ್ಪೋತ್ಸವ (ಹೊಳೆಯಾನ ) ವಿಶೇಷವಾಗಿತ್ತು. ಶ್ರೀ ಕುಲಮಹಾಸ್ತ್ರಿ ಅಮ್ಮನವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರ ಹಾಗೂ ವಿದ್ಯುದ್ವಿಪಾಲಂಕರದಿಂದ ಅಲಂಕರಿಸಿದ ಸಂಗಡ ಕಟ್ಟಿದ ಜೋಡಿ ದೋಣಿಯಲ್ಲಿ ಕೊಂಡೊಯ್ಯಲಾಯಿತು.

ರಜತ ಪಲ್ಲಕ್ಕಿಯಲ್ಲಿ ಇರಿಸಿ ಭಜನೆ, ವಾದ್ಯ ಘೋಷ, ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ರಾತ್ರಿ 11 ಗಂಟೆಗೆಯಿಂದ ಪ್ರಾರಂಭಗೊಂಡು ಸರಿ ಸುಮಾರು 2 ಗಂಟೆಯ ಅವಧಿಯಲ್ಲಿ ಹರಿಯುವ ನೀರಲ್ಲಿ ದೇವರ ಮೆರವಣಿಗೆ ನಡೆಯಿತು . ನಡುಗಡ್ಡೆಯಾದ ಬೆಣ್ಣೆಕುದ್ರು ಗೆ ಒಂದು ಪ್ರದಕ್ಷಿಣೆ ತರಲಾಯ್ತು. ಈ ತೆಪ್ಪೋತ್ಸವ ನೋಡಲು ಸಾವಿರಾರು ಮಂದಿ ಸೇರಿದ್ದು ಕಣ್ಣಿಗೆ ಹಬ್ಬವಾಗಿತ್ತು.
ಈ ಬಾರಿ ಡ್ರೋನ್ ಮೂಲಕ ಶ್ರೀ ಕುಲ ಮಹಾಸ್ತ್ರೀ ಅಮ್ಮ ನವರ ಉತ್ಸವ ಮೂರ್ತಿ ಗೆ ಪುಷ್ಪಾರ್ಚನೆ ಗೈಯಲಾಯಿತು. ಹಲವಾರು ದೋಣಿಗಳು ತೆಪ್ಪೋತ್ಸವದಲ್ಲಿ ಸಾಗಿ ಬಂದದ್ದು ವಿಶೇಷ ಆಕರ್ಷಣೆಯಾಗಿತ್ತು. ಸಹಸ್ರಾರು ಮಂದಿ ಈ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.












