ಉಡುಪಿ: ರಾಜ್ಯದ ಜನತೆಗೆ ಬಜೆಟ್ ಬಗ್ಗೆ ಬಹಳ ನಿರೀಕ್ಷೆಯಿತ್ತು. ಆದರೆ ಅದಕ್ಕೆಲ್ಲಾ ಸಿದ್ದರಾಮಯ್ಯನವರು ಎಳ್ಳುನೀರು ಬಿಟ್ಟಿದ್ದಾರೆ. ಹಿಂದುಳಿದ ವರ್ಗ ದಲಿತರಿಗೆ ವಂಚಿಸುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ದೇವರಾಜ ಅರಸರ ಪ್ರತಿರೂಪ, ಪರಿಶಿಷ್ಟ ಜಾತಿ-ಪಂಗಡ, ದಲಿತರಿಗೆ ನ್ಯಾಯ ಕೊಡುವ ವ್ಯಕ್ತಿ ಎಂದು ಪ್ರಶಂಸಿಕೊಳ್ಳುತ್ತಿದ್ದ ಅವರು, ಬಜೆಟ್ನಲ್ಲಿ ಹಿಂದುಳಿದ ವರ್ಗ ಹಾಗೂ ದಲಿತರ ಪಾಲಿಗೆ ನಿರಾಶಾದಾಯಕವಾಗಿಸಿದೆ ಎಂದು ದೂರಿದರು.
ರಾಜ್ಯದ ಶೇ. 50ರಷ್ಟು ಹಿಂದುಳಿದ ವರ್ಗದವರಿಗೆ ಒಂದೇ ಒಂದು ಯೋಜನೆ ಘೊಷಿಸಿಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ 8 ಹಿಂದುಳಿದ ವರ್ಗದ ಸಮುದಾಯಕ್ಕೆ ನಿಗಮ ಘೋಷಣೆ ಮಾಡಿದ್ದೆವು. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿ 250 ಕೋಟಿ ಅನುದಾನದ ಭರವಸೆ ಈಡಿಗ ಸಮುದಾಯಕ್ಕೆ ನೀಡಲಾಗಿತ್ತು. ಹಿಂದುಳಿದ ವರ್ಗಗಳ ಸಮುದಾಯದ ನಿಗಮಗಳಿಗೆಯೇ ಬಜೆಟ್ ನಲ್ಲಿ ಒಂದು ರೂಪಾಯಿ ಮೀಸಲಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ಹಿಂದುಳಿದ ವರ್ಗದಲ್ಲಿ 1500 ಹಾಸ್ಟೆಲ್ ಸಮರ್ಪಕ ಸ್ಥಿತಿಯಲ್ಲಿಲ್ಲದೆ ಮಕ್ಕಳು ಕಂಗಾಲಾಗಿದ್ದಾರೆ. 75 ಸಾವಿರ ಮಕ್ಕಳು ಹಾಸ್ಟೆಲ್ ನಿರೀಕ್ಷೆಯಲ್ಲಿದ್ದಾರೆ ಒಂದೇ ಒಂದು ಘೋಷಣೆ ಮಾಡಿಲ್ಲ ಎಂದರು.
ಕರಾವಳಿ ಮೀನುಗಾರಿಕೆಗೆ ಬಹುತೇಕ ಉತ್ತೇಜನ ನೀಡುವ ಅವಕಾಶವಿತ್ತು. ಕೇಂದ್ರ ಸರ್ಕಾರದ ಮತ್ಸ್ಯ ಸಂಪತ್ತು ಯೋಜನೆಯಡಿ ಮೀನುಗಾರರಿಗೆ ಶಕ್ತಿ ಕೊಡುವ ಕೆಲಸವಷ್ಟೆ ಆಗಿದೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಹೊಸ ಯೋಜನೆ ಪ್ರಕಟಿಸಿಲ್ಲ ಎಂದರು.












