ಪರಶುರಾಮ ಮೂರ್ತಿ ವಿವಾದ ಬಗೆಹರಿಸಲು ಅಷ್ಟಮಂಗಲ ನಡೆಸಿ: ಮುನಿಯಾಲು ಉದಯಕುಮಾರ್ ಶೆಟ್ಟಿ ಸಲಹೆ

ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಈ ವಿವಾದ ಆದಷ್ಟು ಬೇಗ ಪರಿಹಾರ ಆಗಬೇಕು. ಹೀಗಾಗಿ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಅಷ್ಟಮಂಗಲಪ್ರಶ್ನೆ ನಡೆಸಿ, ಮುಂದಿನ ತೀರ್ಮಾನಕ್ಕೆ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಸಲಹೆ ನೀಡಿದ್ದಾರೆ.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಮೂರ್ತಿ ವಿವಾದ ಅಂತ್ಯ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮೂರ್ತಿ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಪೋಲಿಸ್ ತನಿಖೆ ಚಾಲ್ತಿಯಲ್ಲಿದೆ‌. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಶಿಲ್ಪಿ ಬಂಧಿಸ್ಪಟ್ಟಿದ್ದರು. ಹೀಗಾಗಿ ವಿಗ್ರಹ ಪ್ರತಿಷ್ಠಾಪನೆಯ ಆರಂಭದಲ್ಲಿಯೇ ನಡೆದಿರುವ ಅನಾಹುತಗಳಿಂದ ಜನರು ಭಯಭೀತರಾಗಿದ್ದಾರೆ ಎಂದರು.

ಥೀಮ್ ಪಾರ್ಕ್ ನಿರ್ಮಾಣದ ಮೊದಲು ಉಮಿಕಲ್ ಬೆಟ್ಟದಲ್ಲಿ ದೈವ ಸಾನಿಧ್ಯವಿತ್ತು. ಅದನ್ನು ನೆಲಸಮ ಮಾಡಿ ಕಾಮಗಾರಿಗಳನ್ನು ನಡೆಸಲಾಗಿದೆ. ಇದೀಗ ಅದರ ದೋಷವೇ ಇಂತಹ ದುರಂತಗಳಿಗೆ ಕಾರಣವಾಗಿದ್ದಿರಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳನ್ನು ಅಷ್ಟಮಂಗಲದ ಮೂಲಕ ಪರಿಹರಿಸಿಕೊಳ್ಳಬೇಕೆಂದು ನನ್ನ ಸಲಹೆ ಎಂದರು‌.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ‌ ಆಚಾರ್ಯ, ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.