ನನ್ನ ವಿರುದ್ಧ ಮಾಡಿರುವ ಆರೋಪ‌ ಹಿಂಪಡೆಯಿರಿ, ಇಲ್ಲದಿದ್ದರೆ ಧರಣಿ ಕುಳಿತುಕೊಳ್ಳುತ್ತೇನೆ.

ಉಡುಪಿ: ನನ್ನ ಅವಧಿಯಲ್ಲಿ ಬೋವಿ ಅಭಿವೃದ್ಧಿ ನಿಗಮ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪವನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತುಕೊಳ್ಳುತ್ತೇನೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ನಿಮ್ಮ ಕೈಯಲ್ಲಿದೆ. ನೀವು ಮುಖ್ಯಮಂತ್ರಿ ಆಗಿ ಒಂದು ವರ್ಷ ಕಳೆಯಿತು. ನಾನು ತಪ್ಪು ಮಾಡಿದರೆ ಜೈಲು ಶಿಕ್ಷೆ ಸೇರಿ ಏನನ್ನು ಕೊಡುವ ಅಧಿಕಾರ ನಿಮಗೆ ಇತ್ತು. ಅದ್ಯಾವುದನ್ನು ನೀವು ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ವಿಪಕ್ಷ ನಾಯಕರಾಗಿದ್ದೀರಿ ಅಗಲೂ ಏನು ಸೊಲ್ಲೆತ್ತಿಲ್ಲ. ವಾಲ್ಮೀಕಿ ಹಗರಣದ ಆರೋಪ ಬಂದಾಗ ಬೇರೆಯವರ ತಲೆ ಮೇಲೆ ಹಾಕಲು ಹೀಗೆ ಹೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಿರಿ‌. ಇಲ್ಲವಾದರೆ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ವಹಿಸಿ. ನಾನು ಒಂದು ರೂಪಾಯಿ ಅವ್ಯವಹಾರ ಮಾಡಿದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ದೊಡ್ಡ ಅಪರಾಧ ಮಾಡಿರುವ ಕಾಂಗ್ರೆಸ್ ಸರ್ಕಾರ ತನ್ನ ಹುಲುಕು ಮುಚ್ಚಿಸಲು ಇಲ್ಲಸಲ್ಲದ ಆರೋಪ ಮಾಡುತ್ತೀರಿ. ಹಿಂದಿನ ಸರಕಾರದಲ್ಲಿ ಅಪರಾಧವೇ ಮಾಡದ ಪ್ರಕರಣಗಳನ್ನು ಹೇಳುತ್ತಿದ್ದೀರಿ. ನನ್ನ ಹೆಸರನ್ನು ಕೂಡ ಹಗರಣದಲ್ಲಿ ಎಳೆದು ತಂದಿದ್ದೀರಿ. ಕೊಳವೆಬಾವಿಯಲ್ಲಿ ಹಗರಣ ಮಾಡಿದ್ದಾನೆ ಎಂದಿದ್ದೀರಿ. ನಿಮಗೆ ನಾನು ಅಧಿಕೃತ ಪತ್ರ ಬರೆಯುತ್ತೇನೆ. ನಾನು ಮಂತ್ರಿಯಾಗಿದ್ದಾಗ ಟೆಂಡರಿನಲ್ಲಿ ಅಕ್ರಮವಾಗಿದೆ ಎಂಬ ದೂರು ಕೇಳಿ ಬಂತು. ಕಡತ ತರಿಸಿಕೊಂಡು ನಾನು ತಕ್ಷಣ ಸಿಐಡಿ ತನಿಖೆಗೆ ಆದೇಶಿಸಿದೆ.

ರಾಜ್ಯದ ಇತಿಹಾಸದಲ್ಲಿ ಟೆಂಡರ್ ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ಪ್ರಥಮ ಬಾರಿಗೆ ಆದೇಶ ದೊರೆತ ರೈತರಿಗೆ ನೇರ ಕೊಳವೆಬಾವಿ ಖರೀದಿಗೆ ಅವಕಾಶ ಕಲ್ಪಿಸಿದೆ. ಖಾತೆಗೆ ನೇರ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದೆ. ರೈತನಿಗೆ ಕೊಳವೆಬಾವಿ ಮಂಜೂರಾದರೆ ಯಾವ ಏಜೆನ್ಸಿ ಮೂಲಕ ತರಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಈ ವ್ಯವಸ್ಥೆ ಮಾಡಿದ್ದೆ. ನಾನು ಮಾಡಿದ ವ್ಯವಸ್ಥೆ ಇವತ್ತಿಗೂ ನಡೆಯುತ್ತಿದೆ ಎಂದರು. ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಹಗರಣ ಆಗಿಲ್ಲ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಹೇಳಿದ್ದಾರೆ. ಒಂದೇ ಒಂದು ರೂಪಾಯಿ ದುರುಪಯೋಗ ಆಗಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ.

ನನ್ನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದೀರಿ. ನಾನು ಸ್ಪಷ್ಟೀಕರಣ ಕೇಳಿ ನಿಮಗೆ ಪತ್ರ ಬರೆದಿದ್ದೇನೆ. ಭೋವಿ ನಿಗಮದ ವ್ಯವಹಾರ ಆರೋಪ ಮಾಡಿದ್ದೀರಿ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೆಲ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಅಧಿಕಾರಿಗಳು ದುರ್ನಡತೆಯವರಾಗಿದ್ದರು ಹಗರಣ ಮಾಡಿದ್ದರು. ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿದ್ದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ಮಾಡಿದ್ದೆ ಎಂದು ತಿಳಿಸಿದರು.