ತ್ರಿಶಾ ವಿದ್ಯಾ ಪಿಯು ಕಾಲೇಜು : ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ

ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವು ಜೂನ್ 9ರಂದು ಎಸ್ ವಿ ಎಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಬಿ ಎಮ್ ಹೆಗ್ಡೆ ,ಶಿಕ್ಷಣ ಅಂದರೆ ಬರೀ ಅಂಕಗಳನ್ನು ಗಳಿಸುವುದು ಮಾತ್ರ ಅಲ್ಲ ಜೊತೆಗೆ ವ್ಯಕ್ತಿತ್ವ ವಿಕಸನವನ್ನೂ ಬೆಳೆಸಿಕೊಳ್ಳಬೇಕು. ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ದಿನ ನಿತ್ಯದ ಪಾಠವನ್ನು ಅಂದೇ ಓದಬೇಕು. ಜೊತೆಗೆ ತಮ್ಮ ಜೀವನದಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸಿನ ದಾರಿ ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇರಬೇಕು. ಜ್ಞಾನದ ಹಸಿವು ಇದ್ದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ. ಹಾಗೂ ಶಿಕ್ಷಣದ ಜೊತೆಗೆ ಆತ್ಮಗೌರವವನ್ನು ಬೆಳೆಸಿಕೊಳ್ಳವುದು ಮುಖ್ಯ ಎಂದರು.

ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈರವರು ಕಾಲೇಜಿನ ನಿಯಮಗಳನ್ನು ಹಾಗೂ ಸಿಇಟಿ, ನೀಟ್, ಜೆಇಇ ಕೋಚಿಂಗ್ ಗಳ ಮಾಹಿತಿಯನ್ನು ನೀಡಿದರು. ಪ್ರೊಫೆಸರ್ ರಾಜ್ ಗಣೇಶ್ ಸರ್ ರವರು ವಾಣಿಜ್ಯ ವಿಭಾಗದ ಜೊತೆಗೆ ಸಿ ಎ, ಸಿ ಎಸ್ ಕೋರ್ಸ್ ಗಳ ಅನುಕೂಲತೆಗಳನ್ನು ಹೇಳಿದರು.

ವಿದ್ಯಾರ್ಥಿನಿ ಸಮೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಧ್ಯಾಪಕರಾದ ರಂಜನ್ ವಂದಿಸಿದರು. ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.