ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ: ಆರು ಮಂದಿ ಮೃತ್ಯು.

ಆಂಧ್ರಪ್ರದೇಶ: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಘೋರ ದುರಂತ ಸಂಭವಿಸಿದೆ, ವೈಕುಂಠ ಏಕಾದಶಿಯ ಟಿಕೆಟ್ ಕೌಂಟರ್ ಬಳಿ ಟಿಕೆಟ್ ಗಾಗಿ ನೂಕು ನುಗ್ಗಲು ಸಂಭವಿಸಿ ನಡೆದ ಕಾಲ್ತುಳಿತದಲ್ಲಿ ಆರು ಮಂದಿ ಮೃತಪಟ್ಟು ಹಲವರು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ(ಜ.8) ರಾತ್ರಿ ನಡೆದಿದೆ.

ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ ಪಡೆಯಲು ಬುಧವಾರ ಬೆಳಗ್ಗೆಯಿಂದಲೇ ತಿರುಪತಿಯ ವಿವಿಧ ಟಿಕೆಟ್‌ ಕೇಂದ್ರಗಳಲ್ಲಿ ಸುಮಾರು 4,000 ಕ್ಕೂ ಅಧಿಕ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಟೋಕನ್ ವಿತರಣೆಗಾಗಿ ಬೈರಾಗಿ ಪಟ್ಟಿಡಾ ಪಾರ್ಕ್‌ನಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಅವಕಾಶ ನೀಡಿದಾಗ ಹೆಚ್ಚಿನ ಭಕ್ತರು ಅಲ್ಲಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿ ತಮಿಳುನಾಡು ಮೂಲದ ಮಹಿಳೆ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು ಅಲ್ಲದೆ ಘಟನೆಯಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಬಿಆರ್ ನಾಯ್ಡು ತುರ್ತು ಸಭೆಯನ್ನು ಕರೆದಿದ್ದಾರೆ.