ಉಡುಪಿ: 11 ವರ್ಷದ ಬಾಲಕನೊಬ್ಬ ಭೂತ ಕೋಲ ಕಟ್ಟಿದ ಅಪರೂಪದ ವಿದ್ಯಮಾನ ಕಾರ್ಕಳ ತಾಲೂಕಿನಲ್ಲಿ ಗಮನ ಸೆಳೆದಿದೆ. ಕಾರ್ಕಳ ತಾಲೂಕಿನ ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಮರ್ಥ್ ಗಗ್ಗರ ಕಟ್ಟಿ ಯಶಸ್ವಿಯಾಗಿ ಭೂತ ಪಾತ್ರಿಯಾಗಿ ಕೋಲದಲ್ಲಿ ಪಾಲ್ಗೊಂಡಿದ್ದಾನೆ.
ಶಿರ್ಲಾಲು ಸೂಡಿ ಪಂಗ್ಲಬೆಟ್ಟು, ಮುಂಡ್ಲಿ ಮುಗೇರಕಲ ದೈವಗಳ ಪ್ರತಿಷ್ಠಾ ವರ್ಧಂತ್ಯುತ್ಸವ ನಡೆದಿದ್ದು, ಈ ಸಂದರ್ಭದಲ್ಲಿ ತನ್ನಿಮಾನಿಗ ಹೆಣ್ಣು ದೈವದ ಪಾತ್ರಿಯಾಗಿ ಸಮರ್ಥ್ ಗಗ್ಗರ ಕಟ್ಟಿದ್ದಾನೆ.
ಮೊಗೇರ ಸಮುದಾಯಕ್ಕೆ ಸೇರಿದ ಈ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತದೆ. ಮೋನು ಪಾಣರರ ವ್ಯಾಪ್ತಿಗೆ (ಅಜಲ್ಗೆ) ಈ ದೈವಸ್ಥಾನ ಬರುತ್ತದೆ. ಹಿಂದೆ ಅಜ್ಜ ಮೋನು ಪಾಣರ ಕೋಲ ಕಟ್ಟುತಿದ್ದರು. ಅವರ ಮಗ ಹರೀಶ ಧರ್ಮರಸು ದೈವ ಕೋಲ ಕಟ್ಟುತ್ತಿದ್ದಾರೆ. ಹರೀಶ ಅವರ ಮಗ ಸಮರ್ಥ್ ಈಗ ಬಣ್ಣ ಹಚ್ಚಿದ್ದು, ಈ ಮೂಲಕ ಮೂರನೇ ತಲೆಮಾರಿನ ಬಾಲಕನೂ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದ್ದಾನೆ. ಅಲ್ಲದೆ ಎಳೆಯ ವಯಸ್ಸಿನಲ್ಲೇ ಅಜ್ಜ, ತಂದೆಯವರ ಹಾದಿಯಲ್ಲಿ ಮುನ್ನಡೆಯುತ್ತಿದ್ದಾನೆ.

ಸ್ಥಳೀಯರ ಮಾಹಿತಿ ಪ್ರಕಾರ ತನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು. ಇದು ಬೆಳಗ್ಗಿನ ಜಾವ 2 ಗಂಟೆ ವೇಳೆಗೆ ನಡೆಯುವ ಕೋಲ. ಈ ಕೋಲದಲ್ಲಿ ಕರಿಮಣಿ ಕಟ್ಟುವ ವಿಶೇಷ ಪದ್ಧತಿ ಇದೆ. ಎಡ್ಮೂರ ಮಾಯಗಾರ ತನ್ನಿಮಾನಿಗ ಸೇರಿದಂತೆ ಒಟ್ಟು ನಾಲ್ಕು ದೈವಗಳಿದ್ದು ನೇಮದ ಸಮಯದಲ್ಲಿ ತನ್ನಿಮಾನಿಗ ಹೆಣ್ಣು ದೈವಕ್ಕೆ ಮದುವೆ ಮಾಡಿಸುವ ರಿವಾಜು ಇದೆ. ತುಳುನಾಡಿನ 66 ಕೋಟಿ-ಚೆನ್ನಯ್ಯರ ಗರಡಿ, 33 ಮೊಗೆರಕಳ (ಕಲ್ಲಕಳ)ಗಳಲ್ಲಿ ಶಿರ್ಲಾಲು ಸೂಡಿ ಪಂಗ್ಲಬೆಟ್ಟು, ಮುಂಡ್ಲಿ ಮುಗೇರಕಲವೂ ಒಂದು. ಇದೀಗ ಬಾಲಕನೊಬ್ಬ ಯಶಸ್ವಿಯಾಗಿ ಈ ಕಟ್ಟುಪಾಡುಗಳನ್ವಯ ಭೂತಪಾತ್ರಿಯಾಗಿ ನಿರ್ವಹಣೆ ಮಾಡಿರುವುದು ಜನ ಮನ ಸೆಳೆದಿದೆ.













