ಝಾರಾ ಹೋಟೆಲ್ ಅಕ್ರಮ ಕಟ್ಟಡ ವಾರದೊಳಗೆ ತೆರವಿಗೆ ಕ್ರಮ ಕೈಗೊಳ್ಳಿ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಹೋಟೆಲ್ ಝಾರಾ ಸಹಿತ ಹಲವಾರು ಅಕ್ರಮ ಕಟ್ಟಡಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ ನಿರ್ಮಾಣಗೊಂಡ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ನಗರಸಭೆ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮವಹಿಸಿ ವಾರದೊಳಗೆ ಕಟ್ಟಡಗಳ ತೆರವಿಗೆ ಮುಂದಾಗುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಬಳಿಯ ಅಂಜುಮಾನ್ ರಸ್ತೆಯ ಝಾರಾ ಹೋಟೆಲ್ 2 ವರ್ಷದ ಹಿಂದೆ ನಗರಸಭೆ ತೆರವುಗೊಳಿಸಿದ್ದ ಜಾಗದಲ್ಲಿಯೇ ಮತ್ತೆ ಅದೇ ಹೋಟೆಲ್ ಅಕ್ರಮವಾಗಿ ತಲೆ ಎತ್ತಿದೆ. ರಸ್ತೆ ಸಂಚಾರಕ್ಕೆ ತೊಡಕಾಗುವಂತೆ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಈ ಕಟ್ಟಡಕ್ಕೆ ನೀಡಿರುವ ಕಾನೂನು ಮೀರಿ ನೀಡಿರುವ ಅನುಮತಿಯನ್ನು ರದ್ದುಮಾಡಿ ತೆರವುಗೊಳಿಸುವಂತೆ ಈಗಾಗಲೇ ನಗರಸಭೆಗೆ ದೂರುಗಳು ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕಳೆದ ವರ್ಷದ ಏಪ್ರಿಲ್ ತಿಂಗಳಿನಿಂದ ನಗರಸಭೆಯಲ್ಲಿ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲದ ಕಾರಣ ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಈ ಅವಧಿಯಲ್ಲಿ ಅಧಿಕಾರಿಗಳು ರಾಜಾರೋಷವಾಗಿ ಅಕ್ರಮ ಕಟ್ಟಡಗಳಿಗೆ ಸಹಕಾರ ನೀಡುತ್ತಿದ್ದಾ ಎಂಬ ಆರೋಪ ನಿರಂತರವಾಗಿ ಕೇಳಿ ಬರುತ್ತಿದೆ.

ನಗರಸಭೆಯ ವ್ಯಾಪ್ತಿಯ ಅಕ್ರಮ ಕಟ್ಟಡಗಳ ಬಗ್ಗೆ ಈ ನಿರ್ಲಕ್ಷ ಧೋರಣೆ ಹಾಗೂ ಪರೋಕ್ಷ ಸಹಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಾರದೊಳಗೆ ಈ ಅಕ್ರಮ ಹೋಟೆಲ್ ಕಟ್ಟಡಗಳ ತೆರವಿಗೆ ಮುಂದಾಗದಿದ್ದಲ್ಲಿ, ಸಾರ್ವಜನಿಕರು ಹಾಗೂ ಕಾರ್ಯಕರ್ತರೊಂದಿಗೆ ಈ ಕಟ್ಟಡಗಳ ವಿರುದ್ಧ ಪ್ರತಿಭಟನೆ ನಡೆಸಿ ತೆರವಿಗೆ ಮುಂದಾಗುವ ಸನ್ನಿವೇಶ ಸೃಷ್ಟಿಯಾದರೆ ಮುಂದಿನ ಎಲ್ಲಾ ಬೆಳವಣಿಗೆಗಳಿಗೆ ನಗರಸಭೆ ಪೌರಾಯುಕ್ತರೇ ಹೊಣೆಯಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.