ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ನಿಷ್ಪಕ್ಷಪಾತವಾಗಿ ಜವಾಬ್ದಾರಿಯಿಂದ ತಮ್ಮ ಕಾರ್ಯನಿರ್ವಹಿಸಿ: ಅಪರ ಜಿಲ್ಲಾಧಿಕಾರಿ

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನದ ದಿನದಂದು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಷ್ಪಕ್ಷಪಾತವಾಗಿ ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ತಿಳಿಸಿದರು.

ಅವರು ಇಂದು ನಗರದ ಸೈಂಟ್ ಸಿಸಿಲೀಸ್ ವಿದ್ಯಾ ಸಂಸ್ಥೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಲಾದ ಎರಡನೇ ಸುತ್ತಿನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಚುನಾವಣಾ ಆಯೋಗ ನೀಡಿರುವ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಮತದಾನ ಪ್ರಕ್ರಿಯೆಯು ಸುಸೂತ್ರವಾಗಿ ನಡೆಯುವಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದರು. ಮತಯಂತ್ರಗಳ ಬಳಕೆಯ ಕುರಿತು ಪ್ರಾಯೋಗಿಕ ತರಬೇತಿಗಳನ್ನು ಸರಿಯಾಗಿ ತಿಳಿದುಕೊಂಡಲ್ಲಿ ಮತದಾನ ದಿನದಂದು ಅವುಗಳ ಬಳಕೆಗೆ ಯಾವುದೇ ಸಮಸ್ಯೆಯಿಲ್ಲದೇ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ತರಬೇತಿಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳಲು ಒತ್ತು ನೀಡಬೇಕು ಎಂದರು.

ಮತಗಟ್ಟೆ ಅಧಿಕಾರಿಗಳಿಗೆ ಮತದಾನ ದಿನದಂದು ತಾವು ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ಹ್ಯಾಂಡ್ ಬುಕ್‌ನಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಇದ್ದು, ಅವುಗಳನ್ನು ಸರಿಯಾಗಿ ಓದಿಕೊಂಡಲ್ಲಿ ತಮ್ಮ ಕರ್ತವ್ಯಗಳನ್ನು ಸುಸೂತ್ರವಾಗಿ ಕಾರ್ಯನಿರ್ವಹಿಸಲುಅನುಕೂಲವಾಗುತ್ತದೆ ಎಂದರು.

ಮತದಾನದ ದಿನದಂದು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ತಾಂತ್ರಿಕ ಅಥವಾ ಬೇರೆ ರೀತಿಯ ಗೊಂದಲ, ಸಮಸ್ಯೆಗಳು ಉಂಟಾದಲ್ಲಿ ಹೆದರುವ ಅಗತ್ಯವಿಲ್ಲ. ಎಲ್ಲದಕ್ಕೂ ಚುನಾವಣಾ ಆಯೋಗದಿಂದ ನಿರ್ದೇಶನಗಳಿವೆ ಅದನ್ನು ಪಾಲಿಸಬೇಕು. ಸೆಕ್ಟರ್ ಆಫೀಸರ್, ಹಿರಿಯ ಅಧಿಕಾರಿಗಳ ಸಲಹೆ ಪಡೆದು, ಚುನಾವಣಾ ನಿಯಮಗಳ ಅನುಸಾರ ಕೆಲಸ ಮಾಡಬೇಕೆಂದರು.

ರಾಜ್ಯ ಮಟ್ಟದ ಚುನಾವಣಾ ತರಬೇತಿದಾರಾದ ಅಶೋಕ್ ಕಾಮತ್ ಮಾತನಾಡಿ, ಎಲ್ಲ ಮತಗಟ್ಟೆ ಅಧಿಕಾರಿಗಳು ಅಂಚೆ ಮತದಾನದ ಮೂಲಕ ಮತವನ್ನು ಚಲಾಯಿಸಬೇಕು. ಒಂದು ತಂಡವಾಗಿ ಯಾವುದೇ ದೂರುಗಳಿಗೆ ಆಸ್ಪದವಿಲ್ಲದಂತೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಶಿವಪ್ರಸಾದ್ ಗಾಂವ್ಕರ್, ಡಿಡಿಪಿಐ ಗಣಪತಿ, ತಹಶೀಲ್ದಾರ್ ಗುರುರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.