ಉಡುಪಿ: ಕೇಂದ್ರ ಸರ್ಕಾರ ಅಡುಗೆ ಅನಿಲ, ಇಂಧನ ಬೆಲೆ ಏರಿಸಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಬ್ರಹ್ಮಗಿರಿ ಸರ್ಕಲ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು, ಕೇಂದ್ರ ಸರಕಾರ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಮಹಿಳೆಯರಿಗೆ ಮೋಸ ಮಾಡಿದೆ. ಯುಪಿಎ ಸರಕಾರ ಇದ್ದಾಗ 400 ರೂ ಇದ್ದ ಗ್ಯಾಸ್ ಬೆಲೆ ಈಗ 1000 ರೂ ದಾಟಿದೆ. ರಾತ್ರೋರಾತ್ರಿ ಅಡುಗೆ ಅನಿಲ ಬೆಲೆಯನ್ನು 50 ರೂ ಏರಿಕೆ ಮಾಡಿದ್ದಾರೆ. ಅದರೊಂದಿಗೆ ಪೆಟ್ರೋಲ್ ಡಿಸೇಲ್ ಬೆಲೆಯನ್ನು 2 ರೂ ಏರಿಸಲಾಗಿದೆ. ಮಹಿಳೆಯರು ಮಧ್ಯಮ ವರ್ಗದ ಜನ ಹೇಗೆ ಜೀವನ ನಡೆಸಬೇಕು ಎಂಬ ಚಿಂತೆಯಲ್ಲಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆಯನ್ನು ಮಾಡುತ್ತಿದ್ದು, ಅದು ಕೇಂದ್ರದ ಬಿಜೆಪಿಯ ನಾಯಕರ ವಿರುದ್ದವೇ ಮಾಡುತ್ತಿರಬೇಕು. ಅಚ್ಚೇ ದಿನ್ ಬರುವುದಾಗಿ ಹೇಳಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಆರಂಭಿಸಿದೆ. ಬಿಜೆಪಿಯವರು ಜಾತಿ ಧರ್ಮಧ ಹೆಸರಿನಲ್ಲಿ ಜನರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬೆಲೆ ಏರಿಕೆ ಹಿಂತೆಗೆದುಕೊಳ್ಳುವ ತನಕ ನಮ್ಮ ಪ್ರತಿಭಟನೆ ನಡೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಸೊರಕೆ, ಗೀತಾ ವಾಗ್ಳೆ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳೀ, ಕೃಷ್ಣ ಶೆಟ್ಟಿ ಬಜಗೋಳಿ, ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವರ್, ಅಮೃತ್ ಶೆಣೈ, ಎಮ್ ಎ ಗಫೂರ್, ಅಶೋಕ್ ಕುಮಾರ್ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು












