ಉಡುಪಿ:ಉಡುಪಿ ವಕೀಲರ ಸಂಘದ ನಿಯೋಗವು ಸುಪ್ರೀಮ್ ಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಬಿ.ವಿ. ನಾಗರತ್ನ ಇವರನ್ನು ತಾ. 15ರಂದು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು.
ಉಡುಪಿ ನ್ಯಾಯಾಲಯ ಹಾಗೂ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬದ ಮುಂದುವರಿದ ಭಾಗವಾಗಿ ಉಡುಪಿ ವಕೀಲರ ಸಂಘವು ಮಾರ್ಚ್ ತಾ. 1 ಮತ್ತು 2ರಂದು ಎಮ್.ಜಿ.ಎಮ್. ಕಾಲೇಜಿನ ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ – ವಾಲಿಬಾಲ್ – ತ್ರೋಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಳನ್ನು ಉದ್ಘಾಟಿಸುವಂತೆ ಆಹ್ವಾನಿಸಿತು. ಇದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿಗಳು, ಪಂದ್ಯಾಟಕ್ಕೆ ಶುಭ ಹಾರೈಸಿದರು.
ನಿಯೋಗದಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್, ಕ್ರೀಡಾಕೂಟದ ಸಂಚಾಲಕ ಶ್ರೀ ಮಿತ್ರ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಶ್ರೀ ಟಿ. ವಿಜಯ ಕುಮಾರ್ ಶೆಟ್ಟಿ ಹಾಗೂ ಕ್ರೀಡಾಕೂಟದ ಆಹ್ವಾನ ಸಮಿತಿ ಸಂಯೋಜಕ ಶ್ರೀ ಆರೂರ್ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.