ಉಡುಪಿ: ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಮೆಂಟ್ಸ್ ಸಂಸ್ಥೆಯ ವತಿಯಿಂದ ಇದೇ ಎ. 20 ರಂದು ಮಲ್ಪೆ ಬೀಚ್ನಲ್ಲಿ ಕಲ್ಕೂರ ಬೀಚ್ ಫೆಸ್ಟಿವಲ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಮಾಲೀಕ ರಂಜನ್ ಕಲ್ಕೂರ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಸ್ಥೆಯ 40 ನೇ ವರ್ಷಾಚರಣೆ ಅಂಗವಾಗಿ ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ 5 ಅಪಾರ್ಟ್ಮೆಂಟ್ಗಳಿಗೆ ಮನೆಯ ಒಳಗಿನ ಇಂಟಿರೀಯರ್ಸ್ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇದರಲ್ಲಿ 75 ಪ್ರಶಸ್ತಿಗಳನ್ನು ಘೊಷಿಸಿದ್ದು, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ತರಾನಾ ಸಂಗೀತ ತಂಡದಿಂದ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅಂದು ಶಾಸಕರು, ಸಂಸದರು, ಗ್ರಾಹಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು 60 ಜನ ಅತಿಥಿಗಳು ವೇದಿಕೆಯಲ್ಲಿ ಇರಲಿದ್ದಾರೆ. ಸುಮಾರು 15 ಸಾವಿರ ಜನಕ್ಕೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಅಧಿಕೃತವಾದ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಂಜೆ 4 ರಿಂದ 10 ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ರಂಜನ್ ಕಲ್ಕೂರ ಅವರ ಪುತ್ರ ರಾಹುಲ್ ಮಾತನಾಡಿ, ತಂದೆಯವರ 60 ನೇ ವರ್ಷದ ಷಷ್ಟ್ಯಬ್ದಿಪೂರ್ತಿ ಅಂಗವಾಗಿ ಶಾಂತಿ ಸಮಾರಂಭವು ಇದೇ ವೇದಿಕೆಯಲ್ಲಿ ನಡೆಯಲಿದೆ. ಅವರು ತಮ್ಮ 20 ನೇ ವರ್ಷದಲ್ಲಿ ಸ್ವಂತ ಉದ್ದಿಮೆಯನ್ನು ಆರಂಭಿಸಿ 40 ವರ್ಷಗಳು ಪೂರ್ಣಗೊಂಡಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಿರಿಯ ಪುತ್ರ ರುಶಾಲ್ ಕಲ್ಕೂರ, ಸಹೋದರ ಹರೀಶ್ ಕಲ್ಕೂರ, ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್, ಕಾರ್ಯದರ್ಶಿ ರಾಜೇಶ್ ಪಣಿಯಾಡಿ ಇದ್ದರು.












