ಉಳ್ಳಾಲ ಬೀಚ್’ನಲ್ಲಿ ಮಹಿಳೆಯರ ರಕ್ಷಣೆ- ಓರ್ವ ಮಹಿಳೆ ಮೃತ್ಯು.

ಉಳ್ಳಾಲ: ಆಂಧ್ರಪ್ರದೇಶ ಮೂಲದ ನಾಲ್ವರು ಮಹಿಳೆಯರು ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದು, ಒಬ್ಬಾಕೆ ಸಮುದ್ರಪಾಲಾಗಿದ್ದು, ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ‌.

ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್ ಪ್ರಸನ್ನ ಎಂಬವರ ಪತ್ನಿ ಪರಿಮೀ ರತ್ನ ಕುಮಾರಿ (57) ಸಾವನ್ನಪ್ಪಿದವರು.

ಉಳ್ಳಾಲ ಬೀಚ್ ಸಮುದ್ರದಲ್ಲಿ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ಎಳೆದೊಯ್ದಿತ್ತು. ಸ್ಥಳೀಯರು ತಕ್ಷಣ ನಾಲ್ವರನ್ನು ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ.

ಈ ಪೈಕಿ ಪರಿಮೀ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನಿಂದ 5 ಮಂದಿ ಮಹಿಳೆಯರ ತಂಡ ಜೂ.6 ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಅಲ್ಲಿ ಪ್ರವಾಸ ಮುಗಿಸಿದ ತಂಡ ಇನೋವಾ ಕಾರಿನ ಮೂಲಕ ಜೂ.7 ಕ್ಕೆ ಕೊಡಗಿಗೆ ತಲುಪಿತ್ತು. ಜೂ.9 ಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ನಡೆಸಿ, ನಿನ್ನೆಯಷ್ಟೇ ಧರ್ಮಸ್ಥಳ ಸಂದರ್ಶನ ನಡೆಸಿ ಉಳ್ಳಾಲ ಸಮುದ್ರ ತೀರ ವಿಹಾರಕ್ಕೆ ಬಂದಿದ್ದರು.