ಉಡುಪಿ: ಕಳೆದ ಒಂದೆರಡು ದಿನಗಳಿಂದ ಮಲ್ಪೆ ಸುತ್ತುಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಎಲ್ಲಾ ತರದ ಸಾಲ ಸೌಲಭ್ಯಗಳಿಗೆ ಸಂಪರ್ಕಿಸುವಂತೆ ಕರಪತ್ರ ಹಂಚುತ್ತಿದ್ದು, ಇದನ್ನು ನಂಬಿ ಯಾವುದೇ ರೀತಿಯ ವ್ಯವಹಾರ, ದಾಖಲೆ ನೀಡಬಾರದು ಎಂದು ಉಡುಪಿ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೇವಲ ಮೊಬೈಲ್ ನಂಬ್ರ ಮಾತ್ರ ಹೊಂದಿರುವ ಈ ಕರಪತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಎಲ್ಲಾ ತರದ ಸಾಲ ಸೌಲಭ್ಯ ಗಳಿಗಾಗಿ ಸಂಬಂಧಿಸಿದ ದಾಖಲೆಗಳ ಜೊತೆ ಸಂಪರ್ಕಿಸುವಂತೆ ಎರಡು ಮೊಬೈಲ್ ನಂಬ್ರ ನೀಡಿರುವುದು ಕಂಡುಬರುತ್ತದೆ. ಆದರೆ ಸರಕಾರದ ಅಧಿಕೃತ ಪರವಾನಗಿಯನ್ನು ಸೂಕ್ತ ಪ್ರಾಧಿಕಾರದಿಂದ ಪಡೆಯದೆ ಹಾಗೂ ಸಂಸ್ಥೆಯ ಹೆಸರು, ವಿಳಾಸ ತಿಳಿಸದೆ, ಅನಧಿಕೃತವಾಗಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾರ್ವಜನಿಕರು ಈ ರೀತಿಯ ಪ್ರಚೋದನೆಗೆ ಒಳಗಾಗದೆ ಯಾವುದೇ ರೀತಿಯ ವ್ಯವಹಾರ, ದಾಖಲೆ ನೀಡುವುದು ಮಾಡದೇ ಇರುವುದು ಒಳಿತು. ಒಂದೊಮ್ಮೆ ಮಾಡಿದರೆ ಇದಕ್ಕೆ ಜಿಲ್ಲಾಡಳಿತ ಜವಾಬ್ದಾರಿ ಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.