ಉಡುಪಿ: ಕೆನರಾ ಬ್ಯಾಂಕ್ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಮೂವರು ಮುಸುಕುಧಾರಿಗಳು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಉಡುಪಿ ಉದ್ಯಾವರದಲ್ಲಿ ಇಂದು ಮುಂಜಾನೆ ನಡೆದಿದೆ.
ಮೂರು ಮಂದಿ ಮುಸುಕುಧಾರಿ ಕಳ್ಳರು ಕೆನರಾ ಬ್ಯಾಂಕ್ ನ ಎಟಿಎಂಗೆ ನುಗ್ಗಿ ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ಸೈರನ್ ಮೊಳಗಿದ್ದು, ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸೈರನ್ ಸಂದೇಶ ಕೆನರಾ ಬ್ಯಾಂಕಿನ ಸೆಕ್ಯೂರಿಟಿ ವಿಭಾಗಕ್ಕೆ ರವಾನೆಯಾಗಿದ್ದು, ಬ್ಯಾಂಕ್ ಸಿಬ್ಬಂದಿ ಕೂಡಲೇ ಕಾಪು ಪೋಲಿಸರಿಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ, ಬ್ಯಾಂಕಿನ ಸೆಕ್ಯೂರಿಟಿ ಅಧಿಕಾರಿಗಳನ್ನು ಎಟಿಎಂ ಸ್ಥಳಕ್ಕೆ ಕಳುಹಿಸಿದ್ದಾರೆ. ಬೆರಳಚ್ಚು ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














