ಉಡುಪಿ: ಜಿಲ್ಲೆಯ ಹಿರಿಯ ಪತ್ರಿಕಾ ವಿತರಕರಲ್ಲೊಬ್ಬರಾದ ಪೇತ್ರಿಯ ಬಾಲಕೃಷ್ಣ ಶೆಟ್ಟಿ ನೂಜಿನಬೈಲು (72) ಸೋಮವಾರ ಮುಂಜಾನೆ ವೃತ್ತಿ ನಿರತರಾಗಿದ್ದ ಸಂದರ್ಭದಲ್ಲಿ ಹೇರೂರು ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರರು, ಅಪಾರ ಸಂಖ್ಯೆಯ ಬಂಧುವರ್ಗ, ಮಿತ್ರರನ್ನು ಅಗಲಿದ್ದಾರೆ.
ಸರಳ, ಸಜ್ಜನಿಕೆ ಹಾಗೂ ಸ್ನೇಹಮಯ ವ್ಯಕ್ತಿತ್ವದ ಹಿರಿಯ ಭಜನಾ ಸಾಧಕ ರಾಗಿರುವ ಬಾಲಕೃಷ್ಣ ಶೆಟ್ಟಿ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ಪ್ರಸಕ್ತ ಅವರು ಬ್ರಹ್ಮಾವರ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷರೂ, ಕನ್ನಾರು-ಪೇತ್ರಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಹಿರಿಯ ಸದಸ್ಯರಾಗಿದ್ದಾರೆ.
ಬಾಲಕೃಷ್ಣ ಶೆಟ್ಟಿ ನೂಜಿನಬೈಲು ಇವರ ನಿಧನಕ್ಕೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ನ ಉಡುಪಿ ತಾಲೂಕು ಸಮಿತಿ ತೀವ್ರ ಸಂತಾಪ ಸೂಚಿಸಿದೆ.












