ಉಡುಪಿ: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉದ್ಯಮ ಶೀಲತೆ ಜಾಗೃತಿ ಕಾರ್ಯಕ್ರಮ

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಾಣಿಜ್ಯೋದ್ಯಮ ಅಭಿವೃದ್ಧಿ ಘಟಕವು ಮಂಗಳೂರಿನ ಎಮ್ ಎಸ್ ಎಮ್ ಇ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಆಗಸ್ಟ್ 29 ರಂದು ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆಯ ಬಗ್ಗೆ ಅರಿವು ಮೂಡಿಸಲು “ಉದ್ಯಮ ಶೀಲತೆ ಜಾಗೃತಿ ಕಾರ್ಯಕ್ರಮ” ವನ್ನು ಆಯೋಜಿಸಲಾಗಿತ್ತು. ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಹರೀಶ್ ಕುಂದರ್, ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಮಹತ್ವದ ಬಗ್ಗೆ ತಿಳಿಸಿದರು.

ವಾಣಿಜ್ಯೋದ್ಯಮವು ಹೇಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆ ಮತ್ತು ನಾವಿನ್ಯತೆಯನ್ನು ಹೇಗೆ ಉತ್ತೇಜಿಸುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಉದ್ಯಮಿಗಳಿಗಿರುವ ಅವಕಾಶಗಳು ಮತ್ತು ಮಾರ್ಗದರ್ಶನ ನೀಡುವಲ್ಲಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪಾತ್ರದ ಬಗ್ಗೆ ವಿವರಿಸಿದರು. ಎಮ್ ಎಸ್ ಎಮ್ ಇ ಅಭಿವೃದ್ಧಿ ಸಂಸ್ಥೆಯ ಸಹಾಯಕ ನಿರ್ದೇಶಕ ಸುಂದರ್ ಶೇರಿಗಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇವರು ಮಾತನಾಡಿ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಉದ್ಯಮ ಮತ್ತು ಮಧ್ಯಮ ಉದ್ಯಮಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ಉದ್ಯೋಗ ಸೃಷ್ಟಿ, ಆರ್ಥಿಕ ವೈವಿಧ್ಯತೆ ಮತ್ತು ನಾವಿನ್ಯತೆಗೆ ಉದ್ಯಮಶೀಲತೆ ಹೇಗೆ ಕೊಡುಗೆ ನೀಡುತ್ತದೆ ಎಂಬುದರ ಬಗ್ಗೆ ವಿವರಿಸಿದರು.

ಮಹತ್ವಾಕಾಂಕ್ಷಿ ಉದ್ಯಮಿಗಳನ್ನು ಬೆಂಬಲಿಸುವಲ್ಲಿ ಎಮ್ ಎಸ್ ಎಮ್ ಇ ಅಭಿವೃದ್ಧಿ ಸಂಸ್ಥೆಯು ನೀಡುವ ಯೋಜನೆಗಳ ಬಗ್ಗೆ ಹಾಗೂ ಮಂಗಳೂರಿನಲ್ಲಿ ಸಣ್ಣ ಉದ್ಯಮಗಳು ಮತ್ತು ಸ್ಟಾರ್ಟ್‍ಅಪ್‍ಗಳಿಗೆ ಲಭ್ಯವಿರುವ ಆರ್ಥಿಕ ನೆರವು ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇವರು ಮಾತನಾಡಿ ವಿದ್ಯಾರ್ಥಿಗಳು ಉದ್ಯಮಿಗಳಾಗಳು ಸಂಸ್ಥೆಯ ವಾಣಿಜ್ಯೋದ್ಯಮ ಅಭಿವೃದ್ಧಿ ಘಟಕದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್‍ಗಳು ಮತ್ತು ವಿವಿದ ವಿಭಾಗದ ಮುಖ್ಯಸ್ಥರು, ವಾಣಿಜ್ಯೋದ್ಯಮ ಅಭಿವೃದ್ಧಿ ಘಟಕದ ಸಂಯೋಜಕರಾದ ಡಾ. ಮಧುಕರ್ ನಾಯಕ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.