ಉಡುಪಿ: ಸುಮನಸಾ ಕೊಡವೂರು ಸಂಸ್ಥೆಯ “ರಂಗಹಬ್ಬ – 13” ನಾಟಕೋತ್ಸವ ಇದೇ ಫೆ.23ರಿಂದ ಮಾ.1 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಅಜ್ಜರಕಾಡಿನ ಭುಜಂಗ ಪಾರ್ಕ್ನ ಬಯಲುರಂಗ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ತಿಳಿಸಿದರು.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ.23ರಂದು ಸಂಜೆ 6.30ಕ್ಕೆ ಸಾಹಿತಿ ಅರವಿಂದ ಮಾಲಗತ್ತಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್ನ ಕೊಡುಗೆ ಇರಲಿದೆ ಎಂದರು.
ಯು.ದುಗ್ಗಪ್ಪ ಅವರ ನೆನಪಿನಲ್ಲಿ “ಯಕ್ಷಸುಮ” ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ.ಕೃಷ್ಣಸ್ವಾಮಿ ಜೋಷಿ ಅವರಿಗೆ ನೀಡಲಾಗುವುದು. ಫೆ.23ರಂದು ಬೆಂಗಳೂರಿನ ಪಯಣ ತಂಡದಿಂದ “ತಲ್ಕಿ” ಕನ್ನಡ ನಾಟಕ, ಫೆ.24ರಂದು ಸುಮನಸಾ ಕೊಡವೂರು ತಂಡದಿಂದ “ಗೊಂದಿ” ಕನ್ನಡ ನಾಟಕ, ಫೆ.25ರಂದು ಹಾಸನ ಅನಿಕೇತನ ತಂಡದಿಂದ “ಕಿರಗೂರಿನ ಗಯ್ಯಾಳಿಗಳು”, ಫೆ.26ರಂದು ಸುಮನಸಾ ಕೊಡವೂರು ತಂಡದಿಂದ “ಈದಿ” ತುಳು ನಾಟಕ, ಫೆ.27ರಂದು ಧಾರವಾಡದ ಆಟ-ಮಾಟ ತಂಡದಿಂದ “ಗುಡಿಯ ನೋಡಿರಣ್ಣ” ಕನ್ನಡ ನಾಟಕ, ಫೆ.28ರಂದು ಸುಮನಸಾ ಕೊಡವೂರು ತಂಡದಿಂದ “ವಿದ್ಯುನ್ಮತಿ ಕಲ್ಯಾಣ” ಯಕ್ಷಗಾನ ನಾಟಕ ಹಾಗೂ ಮಾ. 1ರಂದು ಉಡುಪಿ ಪುನಃ ಥಿಯೇಟರ್ ತಂಡದಿಂದ “ಯೋಗಿ ಮತ್ತು ಬೋಗಿ” ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭಾಸ್ಕರ್ ಪಾಲನ್ ಬಾಚನಬೈಲು, ವಿನಯ್ ಕುಮಾರ್, ಯೋಗೀಶ್ ಕೊಳಲಗಿರಿ, ಚಂದ್ರಕಾಂತ್ ಕುಂದರ್, ವಿಜಯಾ ಭಾಸ್ಕರ್ ಉಪಸ್ಥಿತರಿದ್ದರು.












