ಉಡುಪಿ: ಗಿರಿಜಾ ಹೆಗ್ಡೆ ಅವರಿಗೆ “ಶಿಕ್ಷಕ ರತ್ನ” ಪ್ರಶಸ್ತಿ.

ಉಡುಪಿ: ಶ್ರೀಮತಿ ಗಿರಿಜಾ ಹೆಗಡೆ ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜ್ ಉಡುಪಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.

ವಿದ್ಯಾರ್ಹತೆ: ಎಂ.ಎ.(ಅರ್ಥಶಾಸ್ತ್ರ), ಎಂ.ಫಿಲ್(ಉತ್ತರಕನ್ನಡ ಕೈಗಾರಿಕೆಗಳ ಪ್ರಗತಿ), ಎಂ.ಬಿ.ಎ.(ಹೆಚ್ ಆರ್), ಬಿ.ಎಡ್.ಸ್ಲೆಟ್ ಪರೀಕ್ಷೆ ಪಾಸಾಗಿರುತ್ತಾರೆ. ನಿಮ್ಹಾನ್ಸ್ ಕೊಡಮಾಡುವ ಒಂದುವಾರದ ಜೀವನಕೌಶಲ್ಯ ತರಬೇತಿ ಪಡೆದಿದ್ದಾರೆ.

ಹವ್ಯಾಸ-ಕಥೆ ಕವನ ರಚನೆ.
ಇವರು ಪ್ರಕಟಿಸಿದ ಕೃತಿಗಳು
1.ಅನಾವರಣ ಕವನ ಸಂಕಲನ .ಕಾರ್ನಾಡ್ ಸದಾಶಿವರಾವ್ ಸ್ಮಾರಕ ಪ್ರಶಸ್ತಿ ಪಡೆದಿದೆ.
2.ಅಗಸೆಬಾಗಿಲು- ಕವನ ಸಂಕಲನ
3.ನತ್ತು- ಕಥಾ ಸಂಕಲನ ದ ಕಥೆಗೆ ಕೊಡಗಿನ ಗೌರಮ್ಮ ದತ್ತಿನಿಧಿಪ್ರಶಸ್ತಿ ಬಂದಿದೆ.ಹೀಗೆ ಕಥಾ ಮತ್ತು ಕವನ ಸಂಕಲನ ಪ್ರಶಸ್ತಿ ಜೊತೆಗೆ ಇವರ ಹಲವಾರು ಕಥೆ-ಕವನಗಳು ರಾಜ್ಯದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ರಾಜ್ಯ ಜಿಲ್ಲಾ ತಾಲೂಕು ಮಟ್ಟದ ಕವನಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಉಡುಪಿಯ ಪೂರ್ಣಪ್ರಜ್ಞಾ ಮತ್ತು ತ್ರಿಶಾ ಕಾಲೇಜಿನಲ್ಲಿ ಸೇವೆ ಸಲ್ಲಿಸುವಾಗ ವಿಧ್ಯಾರ್ಥಿಗಳನ್ನು C. A ಪರೀಕ್ಷೆ ಪಾಸಾಗಲು ವಿಶೇಷವಾಗಿ ಶ್ರಮಿಸಿದ್ದು ಇಂದು ಇವರ ಹಲವಾರು ವಿಧ್ಯಾರ್ಥಿಗಳು C.A ಪಾಸಾಗಿದ್ದಾರೆ. ಈಗಾಗಲೇ ದೇಶ ವಿದೇಶದ 10000ಕ್ಕಿಂತ ಹೆಚ್ಚಿನ ವಿಧ್ಯಾರ್ಥಿಗಳಿಗೆ ವಿದ್ಯೆಯನ್ನು ದಾರೆ ಎರೆದು ಬದುಕನ್ನು ಸಾರ್ಥಕ್ಯ ಗೊಳಿಸಿದ್ದಾರೆ. ಉತ್ತಮ ಫಲಿತಾಂಶದ ಜೊತೆ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಯಾಗಿ ಸಾಮಾಜಿಕ ಸೇವಾ ಘಟಕಗಳಲ್ಲಿ ವಿಧ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ. ಯೋಗದ ಮಹತ್ವ, ಅರ್ಹಸಮಾಜ ಸೇವಕರ ಸನ್ಮಾನ, ಸ್ವಚ್ಛತಾ ಅಭಿಯಾನ, ಬೇಟಿ ಬಚಾವೊ ಬೇಟಿ ಪಡಾವೋ. ವಿಶೇಷ ಚೇತನ ಮಕ್ಕಳ ಕಾಳಜಿಯ ಕುರಿತ ಅರಿವು ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಮತ್ತು ಮಣಿಪಾಲ ಆಕಾಶವಾಣಿಯಲ್ಲಿ ಇವರ ಕಥೆ ಕವನ ಬಿತ್ತರಗೊಂಡಿದೆ. ಸ್ಥಳೀಯ ಟಿವಿ ಚಾನಲ್ಗಳಲ್ಲಿ ಇವರ ಸಂರ್ದರ್ಶನ ಮೂಡಿಬಂದಿದೆ. ಅರ್ಥಶಾಸ್ತ್ರದ ಉಡುಪಿಜಿಲ್ಲಾ ಪರೀಕ್ಷಾಮಿತ್ರ ಕೈಪಿಡಿಯ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂದಿಸಿದ ಲೇಖನಗಳನ್ನೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಬರೆದು ಪ್ರಕಟಿಸಿರುತ್ತಾರೆ.

ಬಹುಮುಖ ವ್ಯಕ್ತಿತ್ವದ ಇವರ ಕಾರ್ಯ ಪ್ರಶಂಸಿಸಿ 2024ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ “ಶಿಕ್ಷಕ ರತ್ನ “ ಪ್ರಶಸ್ತಿಯನ್ನು ಇದೇ ಬರುವ ಡಿಸೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಕೊಡಮಾಡಲಾಗುತ್ತಿದೆ. ಪ್ರಸ್ತುತ ಉಡುಪಿಯಲ್ಲಿ ಪತಿ ಮತ್ತು ಮಗನೊಂದಿಗೆ ನೆಲೆಸಿದ್ದು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ತನ್ನ ಎಲ್ಲಾ ವಿಧ್ಯಾರ್ಥಿಗಳಿಗೆ ಅರ್ಪಿಸಿದ್ದಾರೆ.