ಉಡುಪಿ: ಕೃಷ್ಣಮಠದ ರಥಬೀದಿಯಲ್ಲಿ ಇನ್ನು ಮುಂದೆ ಫೋಟೋಶೂಟ್ ಮಾಡುವಂತಿಲ್ಲ. ಪ್ರಿ ವೆಡ್ಡಿಂಗ್ ಪೋಸ್ಟ್ ವೆಡ್ಡಿಂಗ್ ಶೂಟಿಂಗ್ ಮಾಡಲು ಅವಕಾಶವಿಲ್ಲ ಎಂದು ಕೃಷ್ಣಮಠ ಸ್ಪಷ್ಟವಾಗಿ ನಿಯಮ ತಂದಿದೆ.
ರಾಜ್ಯದ ಮೂಲೆಮೂಲೆಯ ಜನ ಇಲ್ಲಿಗೆ ಬಂದು ಫೋಟೋಶೂಟ್ ನೆಪದಲ್ಲಿ ಅಸಭ್ಯ ವರ್ತನೆ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಪರ್ಯಾಯ ಪುತ್ತಿಗೆ ಮಠ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಮುಖ್ಯವಾಗಿ ಕೇರಳ, ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್ ಇಲ್ಲೇ ಫೋಟೋಶೂಟ್ ನಡೆಸುತ್ತಾರೆ. ಮಠದ ರಥಬೀದಿಯಲ್ಲಿ ಪಾರಂಪರಿಕ ಕಟ್ಟಡಗಳು ಇವೆ. ಹೀಗಾಗಿ ಇತ್ತೀಚೆಗೆ ಇಲ್ಲಿಗೆ ಫೋಟೋಶೂಟ್ಗೆ ಬರುವ ಜೋಡಿಗಳ ಸಂಖ್ಯೆ ಹೆಚ್ಚಿದೆ. ಫೋಟೋಶೂಟ್ ನೆಪದಲ್ಲಿ ರಥಬೀದಿಯಲ್ಲಿ ಪ್ರೇಮ ಸಲ್ಲಾಪ ನಡೆಸುವ ಬಗ್ಗೆಯೂ ದೂರುಗಳು ಬಂದಿದ್ದವು.
ಅಷ್ಟಮಠಾಧೀಶರು ಓಡಾಡುವ ರಥಬೀದಿಯಲ್ಲಿ ಇದು ಮುಜುಗರ ತರಿಸುತ್ತಿತ್ತು. ಅಲ್ಲದೆ ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳ ಇದಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ ಎಂದು ಕೃಷ್ಣಮಠ ಸ್ಪಷ್ಟ ನಿರ್ಧಾರಕ್ಕೆ ಬಂದಿದೆ.












