ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ಮಕರ ಸಂಕ್ರಾಂತಿ ಉತ್ಸವಕ್ಕೆ ಈ ಬಾರಿ ಆಸ್ಟ್ರೇಲಿಯ ವಿಕ್ಟೋರಿಯ ರಾಜ್ಯದ ಸಂಸದ ಜಾನ್ ಮುಲಾಹಿ ಭೇಟಿ ನೀಡಿದ್ದಾರೆ. ದಿನವಿಡೀ ಶ್ರೀ ಕೃಷ್ಣ ಮಠದಲ್ಲಿ ಕಳೆದ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾತ್ರಿ ನಡೆದ ಮಕರ ಸಂಕ್ರಾಂತಿ ಉತ್ಸವದಲ್ಲೂ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಭಾರತೀಯ ಸಮುದಾಯದ ಜೊತೆ ತಮ್ಮ ಸಂಬಂಧ ಚೆನ್ನಾಗಿದ್ದು ವಿವಿಧ ಚಟುವಟಿಕೆಗಳಿಗೆ ಆರ್ಥಿಕ ಸಹಕಾರಗಳನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡ ಪುತ್ತಿಗೆ ಮಠದ ವೆಂಕಟಕೃಷ್ಣ ಬೃಂದಾವನ ಮತ್ತು ಅನ್ನದಾನ ಮೊದಲಾದ ಚಟುವಟಿಕೆಗಳಿಗೆ ನೆರವು ನೀಡಿರುವುದಾಗಿ ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಈ ಮಂದಿರದಿಂದ ವಿಕ್ಟೋರಿಯಾದ ಜನತೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಶೇ.6 ಭಾರತೀಯರಿದ್ದು, ವಿಕ್ಟೋರಿಯಾ ಸರಕಾರ 25 ಮಿಲಿಯ ಡಾಲರ್ ನೆರವನ್ನು ಭಾರತೀಯ ಸಮುದಾಯಕ್ಕೆ ಮೀಸಲಿರಿಸಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಪಡೆದ ಅವರನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ವಿಶೇಷ ಗೌರವ ಆದರಗಳಿಂದ ಸನ್ಮಾನಿಸಲಾಯ್ತು.
