ಉಡುಪಿ: ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಮೇಲ್ಸೇತುವೆಗೆ ಮೇಲ್ಛಾವಣೆ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಬಿಸಿಲು ಮತ್ತು ಮಳೆಯಿಂದ ರಕ್ಷಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಇಂದ್ರಾಳಿ ರೈಲು ನಿಲ್ದಾಣದ ಮೇಲ್ಸೇತುವೆಯನ್ನು ಸಂಚರಿಸಲು ಬಳಸುತ್ತಾರೆ.
ಸೇತುವೆಗೆ ಮಾಡಿಲ್ಲದೆ ಸುಡು ಬಿಸಿಲಿನಲ್ಲಿ ನಡೆದು ಸಾಗಬೇಕಾಗಿದೆ. ಮಳೆಗಾಲದಲ್ಲಿ ನೆನೆದು ಪೂರ್ಣ ಒದ್ದೆಯಾಗಬೇಕಾಗುತ್ತದೆ. ಒಮ್ಮೊಮ್ಮೆ ರೈಲು ನಿಲ್ದಾಣದಲ್ಲಿ ರೈಲಿನ ನಿಲುಗಡೆಯಲ್ಲಿ ವ್ಯತ್ಯಾಸವಾದರೆ ಪ್ಲಾಟ್ ಫಾರ್ಮ್ ಬದಲಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ.
ಚಿಕ್ಕ ಮಕ್ಕಳನ್ನು ಹೊತ್ತು ಸಾಗುವ ಮಹಿಳೆಯರ ಮತ್ತು ಕುಂಟುತ್ತ ನಡೆದು ಸಾಗುವ ಹಿರಿಯ ನಾಗರಿಕರ ಪರಿಸ್ಥಿತಿ ಹೇಳತೀರದು. ಜಿಲ್ಲಾಡಳಿತ, ಸಂಸದರು, ರೈಲ್ವೆ ಅಧಿಕಾರಿಗಳು ಸಮಸ್ಯೆಯ ಗಂಭೀರತೆ ಅರಿತು ಇದಕ್ಕೊಂದು ಮೇಲ್ಛಾವಣಿ ಮಾಡಬೇಕಾಗಿದೆ.












