ಉಡುಪಿ: ಉಡುಪಿ ನಗರದ ರಥಬೀದಿ ಹಾಗೂ ಹೊರ ವಲಯದಲ್ಲಿರುವ ಶಿವ ಮಂದಿರಗಳಲ್ಲಿ ಇಂದು ಸಂಭ್ರಮದ ಮಹಾ ಶಿವರಾತ್ರಿ ಆಚರಣೆ ನಡೆಯಿತು.
ಉಡುಪಿ ರಥಬೀದಿಯ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ, ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ, ಪರ್ಕಳ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ಬೆಳಗ್ಗಿನ ಜಾವದಲ್ಲಿಯೇ ಭಕ್ತಾದಿಗಳು ಆಗಮಿಸಿ ಭಗವಾನ್ ಶಿವನ ದರ್ಶನವನ್ನು ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ದೇವಾಲಯಗಳನ್ನು ಬಗೆಬಗೆಯ ಹೂವುಗಳ ತೋರಣಗಳಿಂದ ಆಕರ್ಷಕವಾಗಿ ಅಲಂಕಾರಗೊಳಿಸಲಾಗಿತ್ತು. ಭಕ್ತಾದಿಗಳು ರುದ್ರಾಭಿಷೇಕ ಸೇರಿದಂತೆ ವೈವಿಧ್ಯಮಯ ಸೇವೆಗಳನ್ನು ಭಗವಂತನಿಗೆ ಅರ್ಪಿಸಿದರು.ರಥಬೀದಿಯ ಶ್ರೀ ಅನಂತೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಮಹಾರಂಗಪೂಜೆ ನಡೆಯಿತು.

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಶಿವರಾತ್ರಿ ಪ್ರಯುಕ್ತ ರಥೋತ್ಸವದ ಸಂದರ್ಭದಲ್ಲಿ ದೇವಳದ ಹೊರಾಂಗಣದಲ್ಲಿ ದೀಪ ಬೆಳಗಿಸುವುದು, ಮಹಾರಂಗ ಪೂಜೆ ಮೊದಲಾದ ಉತ್ಸವಗಳು ನಡೆದವು. ಪರ್ಕಳ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದಲ್ಲಿಯೂ ಭಜನೆ, ರಂಗಪೂಜೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡರು.














