ಆತಂಕದಲ್ಲಿ ನಾಗರಿಕರು – ಮತ್ತೆ ಒಂಟಿ ಸಲಗ ಪ್ರತ್ಯಕ್ಷ.

ಬೆಳ್ತಂಗಡಿ: ಮತ್ತೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಮೇ 14ರ ಬೆಳಗ್ಗೆ ಚಾರ್ಮಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿಯ ಎರಡನೇ ತಿರುವಿನಲ್ಲಿ ತನ್ನ ಸೊಂಡಿಲಿನಲ್ಲಿ ಮರದ ಕೊಂಬೆಯೊಂದನ್ನು ಹಿಡಿದು ಪ್ರತ್ಯಕ್ಷವಾದ ಒಂಟಿ ಸಲಗ ಕೆಲಕಾಲ ನೂರಾರು ವಾಹನಗಳ ಚಾಲಕ ಹಾಗೂ ಪ್ರಯಾಣಿಕರನ್ನು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿದೆ. ಘಾಟಿ ಪ್ರದೇಶದಲ್ಲೂ ಅರಣ್ಯ ನಾಶ ಮಾಡಿ ತನ್ನ ಬದುಕನ್ನು ಕಿತ್ತುಕೊಳ್ಳ ಹೊರಟ ಮನುಕುಲಕ್ಕೆ ಎಚ್ಚರಿಕೆ ನೀಡಲು ರಾಷ್ಟ್ರೀಯ ಹೆದ್ದಾರಿ ಬದಿಗೆ ಬಂದ ಒಂಟಿ ಸಲಗವನ್ನು ಮರಳಿ ಕಾಡಿಗೆ ಕಳುಹಿಸಲು ಅರಣ್ಯ ಇಲಾಖಾಧಿಕಾರಿಗಳು ಪರದಾಡುತ್ತಿದ್ದಾರೆ; ಸುತ್ತಮುತ್ತ ಎಲ್ಲೂ ದಟ್ಟಡವಿ ಇಲ್ಲದಿರುವಾಗ ಈ ಒಂಟಿ ಸಲಗವನ್ನು ಎಲ್ಲಿಗೆ ಅಟ್ಟುವುದು ಎಂಬುವುದೇ ಅರಣ್ಯ ಇಲಾಖೆಗೆ ಸವಾಲಾಗಿದೆ. ಕಾಡು ಕಡಿದು ಮೆರೆದ ಮಾನವ ತಾನು ಮಾಡಿದ ತಪ್ಪಿಗೆ ತಕ್ಕ ಬೆಲೆ ತೆರಲೇ ಬೇಕಾದ ಸಂದಿಗ್ಧತೆಯಲ್ಲಿದ್ದಾನೆ. ಅರಣ್ಯವಿಲ್ಲದೇ ಕಾಡು ಪ್ರಾಣಿಗಳು ಒಂದೊಂದಾಗಿ ನಾಡಿಗೆ ಬರುತ್ತಿವೆ. ಕಳೆದ ವಾರವಷ್ಟೇ ಚಿರತೆಯೊಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬಂದು ಮರೆಯಾಗಿದ್ದರೂ ಇಲ್ಲಿನ ಜನರಲ್ಲಿ ಹುಟ್ಟಿಸಿದ ಭಯ ಇನ್ನೂ ದೂರವಾಗಿಲ್ಲ. ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ಸಲಗವೊಂದು ಆಗಾಗ ಕಾಣಿಸುತ್ತಿರುವುದು ವಾಹನ ಸವಾರರಿಗೆ ಮಾತ್ರವಲ್ಲ; ಪ್ರಯಾಣಿಕರಿಗೂ ಭಯವನ್ನುಂಟು ಮಾಡಿದೆ. ಮೇ 14ರಂದು ಬೆಳಿಗ್ಗೆ ಆಹಾರವನ್ನರಸಿ ಬಂದ ಆನೆ ರಸ್ತೆ ಬದಿ ಇರುವ ಈಂದ್ ಜಾತಿಯ ಮರವನ್ನು ಕೆಡವಿ ಅದನ್ನು ತಿನ್ನುತ್ತಿತ್ತು ಎನ್ನಲಾಗಿದೆ. ಘಾಟಿ ರಸ್ತೆಯ ಎರಡನೇ ತಿರುವಿನಲ್ಲಿ ಆನೆ ರಸ್ತೆ ಬದಿಯ ಮರದ ಕೊಂಬೆಯನ್ನು ತಿನ್ನುತ್ತಾ ರಸ್ತೆ ಮಧ್ಯೆಯೇ ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಸುದೈವವಶಾತ್ ಇದುವರೆಗೆ ಯಾವುದೇ ವಾಹನಗಳಿಗಾಗಲಿ ಜನರಿಗಾಗಲಿ ದೊಡ್ಡ ಹಾನಿ ಮಾಡದ ಕಾಡಾನೆ ಮುಂದೆ ಅಪಾಯವನ್ನು ತಂದೊಡ್ಡಬಹುದು. ಅದಲ್ಲದೇ ಆನೆಯನ್ನು ನೋಡಿದ ಕೂಡಲೇ ವಾಹನ ಸವಾರರು ಹೆದರಿ ವಾಹನ ಓಡಿಸಿ ಅಪಾಯ ತಂದುಕೊಳ್ಳಬಹುದು ಎಂಬ ಆತಂಕ ಪ್ರಾರಂಭವಾಗಿದೆ. ಈಗಾಗಲೇ ತಾಲೂಕಿನ ಹಲವೆಡೆ ಆನೆ ದಾಳಿಯಿಂದ ಕೃಷಿ ನಾಶ ಹೊಂದಿ ಕೃಷಿಕರು ಚಿಂತಿತರಾಗಿದ್ದಾರೆ. ಅದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಆತಂಕಕಾರಿಯಾಗಬಹುದು ಎಂಬ ಭಯ ಪ್ರಾರಂಭವಾಗಿದೆ.