ಉಡುಪಿ: ಸರ್ಕಾರ ಏಕ ನಿವೇಶನ ನಕ್ಷೆ ಅನುಮೋದನೆ ನೀಡಲು ಈಗಾಗಲೇ ಕೆಲವೊಂದು ವಿನಾಯಿತಿಗಳನ್ನು
ಸಾರ್ವಜನಿಕರ ಹಿತದೃಷ್ಠಿಯಿಂದ ಸುತ್ತೋಲೆಯನ್ನು ಹೊರಡಿಸಿದೆ. ನಿಯಮಾನುಸಾರ ಇದರ ಅನುಷ್ಠಾನವನ್ನು ಮಾಡಬೇಕೆಂದು ಗ್ರಾಮಾಂತರ ಯೋಜನೆ ಇಲಾಖೆಯ ಅಭಿಯಂತರರುಗಳಿಗೆ ಜಿಲ್ಲಾಧಿಕಾರಿ ಸ್ವರೂಪಟ ಟಿ.ಕೆ ಸೂಚನೆ ನೀಡಿದರು.
ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರ್ಕಾರ ಕರಾವಳಿ ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಂದಾಗಿ ಹಲವು ಸಂದರ್ಭಗಳಲ್ಲಿ ರಸ್ತೆಗಳ ಅಗಲವನ್ನು ವಿಸ್ತರಿಸಲು
ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಸಮಯದಲ್ಲಿ ವಿನಾಯಿತಿ ನೀಡಲು ಅವಕಾಶ ನೀಡಿ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಅದರನ್ವಯ ನಿಯಮಾನುಸಾರ ಅನುಮೋದನೆಯನ್ನು ನೀಡಬೇಕು ಎಂದರು.
ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಅನ್ನು ಪಡೆಯಲು ಜನಸಾಮಾನ್ಯರು ಸಂಬAಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು ಎಂದರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ, ಸರಕಾರ ಆಡಳಿತಾತ್ಮಕ ದೃಷ್ಠಿ ಸೇರಿದಂತೆ ಜಿಲ್ಲೆಯ ಸ್ಥಳೀಯ ಭೌಗೋಳಿಕ ಪ್ರದೇಶವನ್ನು ಪರಿಗಣಿಸಿ, ಕೆಲವೊಂದು ವಿನಾಯಿತಿಗಳನ್ನು ನೀಡುತ್ತದೆ. ಅದೇ ರೀತಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಡಿಕೇರಿ ಜಿಲ್ಲೆಗಳಿಗೆ ಏಕ ನಿಕ್ಷೆ ವಿನ್ಯಾಸ ಅನುಮೋದನೆ ನೀಡಲು ಹಲವು ವಿನಾಯಿತಿಗಳನ್ನು ನೀಡಿ, ಈ ಹಿಂದೆ ಸುತ್ತೋಲೆಯನ್ನು ಹೊರಡಿಸಿದೆ.
ಅದರನ್ವಯ ಏಕವಿನ್ಯಾಸ ಅನುಮೋದನೆಯನ್ನು ನೀಡಿದರೆ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಸಮಸ್ಯೆಗಳು ಬಗೆಹರಿಯುತ್ತವೆ.
ಅಧಿಕಾರಿಗಳು ಇವುಗಳನ್ನು ಇಚ್ಛಾಶಕ್ತಿಯಿಂದ ಮಾಡುವುದರೊಂದಿಗೆ ಜನರಿಗೆ ನೆರವಾಗಬೇಕು. ಸರಕಾರದ ಸುತ್ತೋಲೆಗಳನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಅರ್ಥೈಸಿಕೊಳ್ಳುವುದು ತಪ್ಪು ಎಂದರು.
ಸಾರ್ವಜನಿಕರು ಆಸ್ತಿ ಖರೀದಿ ಮಾಡಿ, ಕ್ರಯಪತ್ರವಾಗುವ ಸಂದರ್ಭದಲ್ಲಿ ಭೂಮಿಯ ಪೂರ್ತಿ ಭಾಗಕ್ಕೆ ಶುಲ್ಕವನ್ನು
ಕಟ್ಟಿಸಿಕೊಳ್ಳುತ್ತಾರೆ. ಆದರೆ ಅದರಲ್ಲಿ ರಸ್ತೆಯ ಜಾಗವೂ ಒಳಗೊಂಡಿರುತ್ತದೆ.ಇದು ಸರಿಯಲ್ಲ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ತಮ್ಮ ವಾಸಕ್ಕೆ ಸ್ವಂತ ಕಟ್ಟಡಗಳನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಏಕನಕ್ಷೆ ವಿನ್ಯಾಸ ಅನುಮೋದನೆ ಪಡೆಯಲು ನಗರ ಯೋಜನಾ ಪ್ರಾಧಿಕಾರದಲ್ಲಿ ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿ ಇದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸರಕಾರದಿಂದ ಬಡಜನರಿಗೆ 94 ಸಿ ಸೇರಿದಂತೆ ಮತ್ತಿತರ ಮಂಜೂರಾತಿಯಲ್ಲಿ ನೀಡಿದ ನಿವೇಶನಗಳಿಗೂ ಏಕನಕ್ಷೆ ನಿವೇಶನ ವಿನ್ಯಾಸ ಅನುಮೋದನೆ ಪಡೆಯಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈಗಾಗಲೇ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದಕ್ಕೆಲ್ಲಾ
ವಿನಾಯಿತಿಗೊಳಿಸಬಹುದೆಂಬುದನ್ನು ನಿಖರವಾಗಿ ಸೂಚಿಸಲಾಗಿದೆ. ಅದರನ್ವಯ ಅನುಮೋದನೆ ನೀಡುವುದು ಒಳಿತು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.












