ಬದುಕು ಭಾವಕ್ಕೆ ಬೆಳಕು ಸಿಗುವುದು ಇದೇ ಹಬ್ಬದಿಂದ: ದೀಪಾವಳಿಯ ವಿಶೇಷ ಬರಹ

ದೀಪಾವಳಿ ಹಬ್ಬ ಎಂದಾಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ ಮತ್ತು ಬೆಳಕು. ಆದರೆ ಈ ಬೆಳಕು ಕೇವಲ ಹೊರಗಿನ ಬೆಳಕು ಮಾತ್ರವಲ್ಲ, ಅದು ಮನುಷ್ಯನೊಳಗಿನ ಅಂಧಕಾರವನ್ನು ಹೋಗಲಾಡಿಸುವ ಸಂಕೇತವಾಗಿದೆ. ಮನುಷ್ಯನಲ್ಲಿರುವ ಅಜ್ಞಾನ, ದುರ್ವಿಚಾರ, ದುಆಚಾರ ಹಾಗೂ ಮನದ ಕತ್ತಲೆ ಇವುಗಳನ್ನೆಲ್ಲ ದೂರ ಮಾಡಿ, ಆತ್ಮಜ್ಞಾನ ಮತ್ತು ಶಾಂತಿಯ ಬೆಳಕು ಹಚ್ಚುವ ಹಬ್ಬವೇ ದೀಪಾವಳಿ.

ನಾವು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಮನೆಯಲ್ಲಿ ದೀಪ ಬೆಳಗಿಸುತ್ತೇವೆ. ಆದರೆ ದೀಪಾವಳಿ ದಿನದಲ್ಲಿ ದೀಪ, ಹಣತೆ, ಬೆಳಕಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮೊದಲು ದೀಪ ಹಚ್ಚುವುದು ಪಾವಿತ್ರ್ಯ ಮತ್ತು ಶುಭಾರಂಭದ ಸಂಕೇತವಾಗಿದೆ. ನಂದಾದೀಪವನ್ನು ಹಚ್ಚಿ ಪೂಜೆಯನ್ನು ಪ್ರಾರಂಭಿಸುವುದು ನಮ್ಮ ಪರಂಪರೆಯ ಅಂಗವಾಗಿದೆ. ದೀಪದಿಂದಲೇ ಮತ್ತೊಂದು ದೀಪವನ್ನು ಬೆಳಗಿಸುವುದು ‘ಜ್ಞಾನದಿಂದ ಜ್ಞಾನ ಹರಡುವುದು’ ಎಂಬ ತತ್ತ್ವವನ್ನು ಸಾರುತ್ತದೆ. ಲಕ್ಷ್ಮಿ ದೇವಿಯನ್ನು ಬೆಳಕು, ಪ್ರಗತಿ ಮತ್ತು ಸಮೃದ್ಧಿಯ ಸಂಕೇತವಾಗಿ ಕಾಣಲಾಗುತ್ತದೆ.

ದೀಪಾವಳಿ ಕೇವಲ ಧಾರ್ಮಿಕ ಹಬ್ಬವಲ್ಲ, ಇದು ಒಂದು ಋತು ಹಬ್ಬವೂ ಆಗಿದೆ. ಸನಾತನ ಧರ್ಮದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬವೂ ಪ್ರಕೃತಿಯ ಬದಲಾವಣೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಋತು, ಮಾಸ ಮತ್ತು ತಿಥಿಗಳ ಪರಿವರ್ತನೆಗೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುವ ನಮ್ಮ ಸಂಸ್ಕೃತಿ, ಪ್ರಕೃತಿಯೊಂದಿಗೆ ಮಾನವನ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ನಾವು ದೀಪಾವಳಿಯನ್ನೂ ಪ್ರಕೃತಿಯ ಹಬ್ಬವೆಂದು ಕಾಣಬಹುದು — ಪ್ರಕೃತಿಯ ಬದಲಾವಣೆಯಲ್ಲಿ ಲಕ್ಷ್ಮಿಯ ಲೀಲೆಯನ್ನು ಅರಿತು ಸಂತೋಷ ಪಡುವ ಸಮಯ.

ದೀಪದ ತುದಿ ಸರ್ವತೋಮುಖವಾಗಿರುತ್ತದೆ; ಅದು ಸುತ್ತಮುತ್ತಲನ್ನೆಲ್ಲ ಬೆಳಗಿಸುತ್ತದೆ. ಆದರೆ ಅದರ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿರುತ್ತದೆ. ಇದು ಮನುಷ್ಯನ ಮನಸ್ಸು ಸದಾ ಊರ್ಧ್ವಗಾಮಿಯಾಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ. ದೀಪ ತನ್ನನ್ನು ತಾನು ಉರಿದುಕೊಂಡು ಇತರರಿಗೆ ಬೆಳಕು ನೀಡುತ್ತದೆ. ಅದೇ ರೀತಿ, ಮನುಷ್ಯನು ತಾನು ತ್ಯಾಗಮಯನಾಗಿ, ಸುತ್ತಮುತ್ತಲಿನವರ ಜೀವನಕ್ಕೆ ಬೆಳಕಾಗಬೇಕು ಎಂಬ ಅರ್ಥವನ್ನೂ ಈ ಹಬ್ಬ ಸಾರುತ್ತದೆ.

ಹೀಗಾಗಿ ದೀಪಾವಳಿ ಕೇವಲ ಪಟಾಕಿ ಮತ್ತು ಸಿಹಿತಿಂಡಿಗಳ ಹಬ್ಬವಲ್ಲ — ಅದು ಮನುಷ್ಯನ ಮನಸ್ಸಿನಲ್ಲಿ ಜ್ಞಾನ, ಶಾಂತಿ ಮತ್ತು ಪ್ರಗತಿಯ ಬೆಳಕು ಹಚ್ಚುವ ಪವಿತ್ರ ಕ್ಷಣವಾಗಿದೆ.ಅಂಧಕಾರದಿಂದ ಬೆಳಕಿನತ್ತ, ಅಜ್ಞಾನದಿಂದ ಜ್ಞಾನೋದಯದತ್ತ — ಇದೇ ದೀಪಾವಳಿಯ ನಿಜವಾದ ಅರ್ಥ.