ಮಣಿಪಾಲ: ಶ್ರೀ ಶಾರದಾ ಮ್ಹಾಂಟೇಸ್ಸರಿ/ ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆಯ ನೂತನ ಕಾರ್ಯಾಲಯ ಉದ್ಘಾಟನೆ

ಮಣಿಪಾಲ: ಭಾರತ್ ಸೇವಕ್ ಸಮಾಜ್ ಹಾಗೂ ಶಾರದಾ ವಿಕಾಸ್ ಟ್ರಸ್ಟ್ ಬೆಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಡುಪಿ- ಕುಂಜಿಬೆಟ್ಟುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಶಾರದಾ ಮ್ಹಾಂಟೇಸ್ಸರಿ/ ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆಯ ಸ್ಥಳಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಕ್ರಿಸ್ಟಲ್ ಬಿಜ್ಸ್ ಹಬ್ ಕಟ್ಟಡದ ಮೊದಲನೇ ಮಹಡಿಗೆ ಸ್ಥಳಾಂತರಗೊಂಡ ಸಂಸ್ಥೆಯನ್ನು ವಾಸ್ತುತಜ್ಞ, ಅಧ್ಯಾಪಕ ಶ್ರೀಪತಿ ಆಚಾರ್ಯ ಅಂಬಲಪಾಡಿ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ವಿಶಾಲ ಸಂಕೀರ್ಣದಲ್ಲಿ ಮುನ್ನಡಿಯಿಡುವ ಈ ಸಂಸ್ಥೆಯು ನಿರಂತರ ಕಲಿಕಾ ಸಾಮರ್ಥ್ಯವನ್ನು ಪ್ರಚಾರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ ಹಾಗೂ ಮ್ಹಾಂಟೇಸ್ಸರಿ ತರಬೇತಿಯು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಪ್ರೇರಕವಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಕ್ಷಕ ಅಡ್ವೆ ರವೀಂದ್ರ ಪೂಜಾರಿ, ಕಟ್ಟಡದ ಮಾಲೀಕ ಅಪ್ಪು ಮರಕಾಲ, ಶಿಕ್ಷಕ ವಿವೇಕ್ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಸುನೀತಾ ಸ್ವಾಗತಿಸಿದರು. ಉಲ್ಲಾಸ್ ಉದಯ ಕುಮಾರ್ ವಂದಿಸಿದರು. ಪ್ರಾಧ್ಯಾಪಕಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.