ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಜಾರಿಗೊಳಿಸುವುದು ಖಚಿತ: ಬೊಮ್ಮಾಯಿ

ಉಡುಪಿ: ಲವ್ ಜಿಹಾದ್ ವಿರುದ್ಧ ಕರ್ನಾಟಕದಲ್ಲಿ ಆದಷ್ಟು ಬೇಗ ಕಾನೂನು ಜಾರಿಗೊಳಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಹರಿಯಾಣ, ಮಧ್ಯಪ್ರದೇಶ ಸರ್ಕಾರ, ಉತ್ತರ ಪ್ರದೇಶ ಸರ್ಕಾರಗಳು ಲವ್ ಜಿಹಾದ್ ಬಗ್ಗೆ ಕಾನೂನು ರೂಪಿಸಲು ನಿರ್ಧರಿಸಿವೆ. ಯುಪಿ ಸರ್ಕಾರ ಕಾನೂನು ಜಾರಿಗೊಳಿಸಿದೆ. ಅದರಂತೆ ಕರ್ನಾಟಕದಲ್ಲೂ ಲವ್ ಜಿಹಾದ್ ತಡೆಗೆ ಕಾನೂನು ತರಲು ತೀರ್ಮಾನಿಸಲಾಗಿದೆ ಎಂದರು.

ಕಾನೂನನ್ನು ಯಾವ ರೀತಿ ಮಾಡಬೇಕು. ಅದರಲ್ಲಿ ಯಾವುದೆಲ್ಲ ಅಂಶ ಸೇರಿಸಬೇಕು. ಎಂಬುವುದರ ಬಗ್ಗೆ ತೀರ್ಮಾನ ಮಾಡುತ್ತಿದ್ದೇವೆ. ಅಲ್ಲದೆ ಯುಪಿ ಸರ್ಕಾರದ ಜಾರಿಗೊಳಿಸಿರುವ ಕಾನೂನಿನ ಪ್ರತಿಯನ್ನು ತರಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹಾಗೆ ಬೇರೆ ರಾಜ್ಯಗಳ ಯಾವ ರೀತಿ ಇದೆ ಎನ್ನುವುದನ್ನು ಪಡೆದುಕೊಂಡು ರಾಜ್ಯದಲ್ಲೂ ಆದಷ್ಟು ಬೇಗ ಕಾನೂನು ಜಾರಿಗೆ ತರಲಾಗುವುದು ಎಂದರು.

ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಖ್ಯಮಂತ್ರಿಗಳ ಒಪ್ಪಿಗೆಯೂ ಇದೆ. ಸಿದ್ದರಾಮಯ್ಯನವರು ತಾನು ಮೊಘಲ್ ಕಾಲದಲ್ಲಿ ಇದ್ದೇನೆ ಎಂದು ಭಾವಿಸಿರಬೇಕು. ಅದಕ್ಕೆ ಮೊಘಲ್ ಕಾಲದಿಂದಲೂ ಲವ್ ಜಿಹಾದ್ ಇದೆ ಎಂದಿದ್ದಾರೆ ಎಂದು ಟೀಕಿಸಿದರು.