ಹುಲಿಯನನ್ನು ಕಾಡಿಗಟ್ಟಿ ಕರ್ನಾಟಕ ರಕ್ಷಿಸಿ: ಕಟೀಲ್ ಲೇವಡಿ

ಮಡಿಕೇರಿ: ಕಾಡು ಮನುಷ್ಯನಿಗಿಂತ ಕಾಡು ಪ್ರಾಣಿಗಳಿಂದ ಹೆಚ್ಚು ಆಪತ್ತು. ಹಾಗಾಗಿ ಕರ್ನಾಟಕದಲ್ಲೂ ಒಂದು ಹುಲಿ (ಸಿದ್ದರಾಮಯ್ಯ) ಇದೆ. ಅದನ್ನು ಕಾಡಿಗಟ್ಟುವ ಮೂಲಕ ಕರ್ನಾಟಕ ರಾಜ್ಯವನ್ನು ರಕ್ಷಿಸಬೇಕಿದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿರುಗೇಟು ನೀಡಿದರು.

ಮಡಿಕೇರಿಯಲ್ಲಿ ಇಂದು ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಶಿರಾ ಕ್ಷೇತ್ರದ ಉಸ್ತುವಾರಿಯನ್ನು ಸಿದ್ದರಾಮಯ್ಯ ಹಾಗೂ ಆರ್ ಆರ್ ನಗರದ ಉಸ್ತುವಾರಿಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಬಂಡೆ ವರ್ಸಸ್ ಹುಲಿಯಾ ನಡುವೆ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಿದ್ದು, ನಾಯಕತ್ವಕ್ಕಾಗಿ ನಾಯಕರ ನಡುವೆ ಯುದ್ಧ ಶುರುವಾಗಿದೆ ಎಂದು ಟೀಕಿಸಿದರು.

ಬಿಜೆಪಿಯವರು ಗೋಮಾತೆಯ ವಂಶಸ್ಥರು. ಕೊಟ್ಟ ಮಾತಿಗೆ ತಪ್ಪಲ್ಲ. 17 ಮಂದಿ ಶಾಸಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಅವರನ್ನು ಮತ್ತೆ ಶಾಸಕರನ್ನಾಗಿಸಿ, ಸಚಿವ ಸ್ಥಾನವನ್ನೂ ನೀಡಿದ್ದೇವೆ. ಕಾಂಗ್ರೆಸ್‌ ಪಕ್ಷದಲ್ಲಿ ಭವಿಷ್ಯ ಇಲ್ಲ ಎಂಬುವುದು ಶಾಸಕರಿಗೆ ಅರಿವಾಗಿದೆ. ಹಾಗಾಗಿ ಕಾಂಗ್ರೆಸ್‌ 16 ಶಾಸಕರು ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ ಎಂದು ಬಾಂಬ್ ಸಿಡಿಸಿದರು.