ಬೈಂದೂರು: ಹೊಳೆಯಲ್ಲಿ ಮುಳುಗಿ ರೈತ ಮೃತ್ಯು

ಬೈಂದೂರು: ಹೊಳೆಗೆ ಬಿದ್ದು ರೈತನೋರ್ವ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕಂಬದ ಕೋಣೆ ಗ್ರಾಮದ ಎಂಬಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಕಂಬದ ಕೋಣೆ ಗ್ರಾಮದ ಪುಟ್ಟಿ ನಿವಾಸಿ ಸುರೇಶ್ ಪೂಜಾರಿ (51) ಮೃತ ವ್ಯಕ್ತಿ. ಇವರು ಫೆ. 28ರಂದು ಕೃಷಿ ಕೆಲಸಕ್ಕಾಗಿ ಮನೆಯಿಂದ ಹೋಗಿದ್ದರು. ಆದರೆ ಅಂದು ಮನೆಗೆ ವಾಪಸ್ಸು ಬಂದಿರಲಿಲ್ಲ.

ಮನೆಯವರು ಎಷ್ಟೇ ಹುಡುಕಾಟ ನಡೆಸಿದರೂ ಸುರೇಶ್ ಪೂಜಾರಿ ಪತ್ತೆಯಾಗಿರಲಿಲ್ಲ. ಮಾರ್ಚ್ 1 ರಂದು ಬೆಳಿಗ್ಗೆ 7ಗಂಟೆಗೆ ಮೃತರ ಸಂಬಂಧಿ ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆ ತೀರದಲ್ಲಿ ಹುಡುಕುತ್ತಿರುವಾಗ ಸುರೇಶ್ ಪೂಜಾರಿ ಮೃತದೇಹ ತೇಲಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುರೇಶ್ ಪೂಜಾರಿ ಫೆ. 28ರಂದು ಕೃಷಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಎಡಮಾವಿನ ಹೊಳೆಯ ದಡದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.