ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಅದ್ಧೂರಿ ಸಾಂಸ್ಕೃತಿಕ ವೈಭವ

ಕಾರ್ಕಳ: ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಇಂದು (ನವೆಂಬರ್ 29) ಸಂಜೆ 5:45ಕ್ಕೆ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಅದ್ಧೂರಿ ಸಾಂಸ್ಕೃತಿಕ ವೈಭವ ಜರುಗಲಿದೆ. ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಉದ್ಘಾಟಿಸಲಿದ್ದು, ಸಮಾರಂಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನುಡಿಸಿರಿ–ವಿರಾಸತ್ ಘಟಕದ ಗೌರವಾಧ್ಯಕ್ಷ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ,ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಉದ್ಘಾಟಿಸಲಿದ್ದು,ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಆಳ್ವಾ ಮತ್ತು ತಾಲೂಕಿನ ಪ್ರಮುಖ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು.ಈ ವರ್ಷದ ನುಡಿಸಿರಿ–ವಿರಾಸತ್ ಸಾಂಸ್ಕೃತಿಕ ವೈಭವವನ್ನು ಕೀರ್ತಿಶೇಷ ಎಂ.ಕೆ. ವಿಜಯಕುಮಾರ್ ಅವರ ಸ್ಮರಣೆಗೆ ಅರ್ಪಿಸಲಾಗಿದೆ.

500 ಕ್ಕೂ ಹೆಚ್ಚಿನ ಸಾಂಸ್ಕೃತಿಕ ವೈಭವ:

ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರು ವಿವಿಧ ಭಾರತೀಯ ಕಲಾ ಪ್ರಕಾರಗಳ ಮನಮೋಹಕ ಪ್ರದರ್ಶನ ನೀಡಲಿದ್ದಾರೆ. ಯೋಗ ದೀಪಿಕಾ, ಅಷ್ಟಲಕ್ಷ್ಮಿ ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ ‘ಶಂಕರಾರ್ಧ ಶರೀರಿಣಿ’, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ‘ಹಿರಣ್ಯಾಕ್ಷ ವಧೆ’, ಬೊಂಬೆ ವಿನೋದಾವಳಿ ಸೇರಿದಂತೆ ಅನೇಕ ವೈವಿಧ್ಯಮಯ ಕಲಾರೂಪಗಳು ವೇದಿಕೆಯನ್ನು ರಂಗಿನಗೊಳಿಸಲಿವೆ.
ಕಾರ್ಯಕ್ರಮವು ಆಳ್ವಾಸ್ ವಿದ್ಯಾರ್ಥಿಗಳ ಸಿಂಗಾರಿ ಮೇಳ ಪ್ಯೂಷನ್ ವಿನೋದಾವಳಿಯೊಂದಿಗೆ ಆರಂಭಗೊಳ್ಳಲಿದ್ದು, ಆಕರ್ಷಕ ಬೊಂಬೆ ಸಿಡಿಮದ್ದಿನ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಲಿದೆ.

15,000 ಕ್ಕೂ ಹೆಚ್ಚಿನ ಆಸನ:
ಪ್ರೇಕ್ಷಕರಿಗಾಗಿ 15,000ಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿರಲಿದೆ. ಸಾಂಸ್ಕೃತಿಕ ವೈಭವ ಕಾರ್ಕಳ ಸ್ವರಾಜ್ ಮೈದಾನದ ಎಂ. ರಾಮಚಂದ್ರ ವೇದಿಕೆಯಲ್ಲಿ ಜರುಗಲಿದೆ.